ಬೆಂಗಳೂರು : ರೌಡಿಶೀಟರ್ ಮನೀಷ್ ಶೆಟ್ಟಿ ಹತ್ಯೆ ಪ್ರಕರಣ ಆರೋಪಿಗಳನ್ನು ತನಿಖೆಗೆ ಕರೆದೊಯ್ಯುವಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿ ಯತ್ನ ನಡೆದಿದ್ದು, ಪೊಲೀಸರು ಇಬ್ಬರು ಆರೋಪಿಗಳ ಕಾಲಿನ ಮೇಲೆ ಶೂಟೌಟ್ ಮಾಡಿದ್ದಾರೆ ,ಘಟನೆಯಲ್ಲಿ ಹೆಡ್ ಕಾನ್ಸ್ಟೇಬಲ್ ಹಾಗು ಪಿಎಸ್ಐ ಅವರಿಗೆ ಗಾಯಗಳಾಗಿದೆ.
ಇಂದು ಬೆಳಿಗ್ಗೆ ನಾಲ್ವರು ಆರೋಪಿಗಳಾದ ಶಶಿಕಿರಣ್ ಅಲಿಯಾಸ್ ಮುನ್ನಾ ಅಲಿಯಾಸ್ ನಾಗಭೂಷಣ್(45), ಗಣೇಶ್(39),ನಿತ್ಯಾ ನಾಗೇಶ್ (29), ಅಕ್ಷಯ್ (32) ಬಂಧಿಸಿದ ಪೊಲೀಸರು, ಸಂಜೆ 6:30 ರ ಸುಮಾರಿಗೆ ಶಾಂತಿನಗರ ಸ್ಮಶಾನದ ಬಳಿ ಮಾರಕಾಸ್ತ್ರಗಳನ್ನು ಎಸೆದ ಸ್ಥಳ ಮಹಜರಿಗೆ ಕರೆತಂದಿದ್ದರು. ಈವೇಳೆ ಆರೋಪಿಗಳಾದ ಶಶಿಕಿರಣ್ ಹಾಗೂ ಅಕ್ಷಯ್ ನಿಂದ ಪೊಲೀಸರ ಮೇಲೆ ಹಲ್ಲೆ ಯತ್ನ ನಡೆಯಿತು .ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ ,ಗಾಯಾಳು ಆರೋಪಿಗಳನ್ನು ಸೆಂಟ್ ಫಿಲೋಮಿನಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ಹೇಳಿಕೆ ನೀಡಿದ್ದಾರೆ .
4 ಜನರು ಸುಮಾರು ನಾಲ್ಕು ತಿಂಗಳಿನಿಂದ ಸಂಚು ರೂಪಿಸಿ ಮನೀಷ್ ಶೆಟ್ಟಿಯನ್ನು ಕೊಲೆ ಮಾಡಿದ್ದಾರೆ ,ಮನೀಶ್ ಶೆಟ್ಟಿ ಬರೋದನ್ನ ವಾಚ್ ಮಾಡಿ, ಕಾರಿಂದ ಇಳಿದ ತಕ್ಷಣ ಬೆನ್ನಿಗೆ ಶೂಟ್ ಮಾಡಿದ್ದಾರೆ, ಅಕ್ಷಯ್ 4 ಬಾರಿ ಮಚ್ಚಿನಿಂದ ಹೊಡೆದು , ಮಾರಕಾಸ್ತ್ರಗಳನ್ನು ಅಲ್ಲೇ ಪಕ್ಕದಲ್ಲಿ ಎಸೆದು ನಂತರ ಒಂದೇ ಬೈಕ್ ನಲ್ಲಿ ಮೂವರು ಪರಾರಿಯಾಗಿ ಗಾಂಧಿನಗರದ ಲಾಡ್ಜ್ ಒಂದರಲ್ಲಿ ತಂಗಿದ್ದರು. ಇವತ್ತು ಬೆಳಿಗ್ಗೆ ಅಲ್ಲಿಂದಲೇ ಬಂಧಿಸಲಾಯಿತು.
ಈ ಘಟನೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.
ತನಿಖೆ ಪ್ರಗತಿಯಲ್ಲಿದ್ದು ,ಆರೋಪಿಗಳ ವಿಚಾರಣೆಯಿಂದ ಇನ್ನಷ್ಟು ಮಾಹಿತಿಗಳು ಹೊರಬರಬೇಕಾಗಿದೆ.