ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಮತ್ತು ಯುವ ನಿರ್ದೇಶಕ ವಿಘ್ನೇಶ್ ಶಿವನ್ ಮೊನ್ನೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಸಂಭ್ರಮದಲ್ಲಿರುವ ಈ ನವ ಜೋಡಿಗೆ ಅಭಿಮಾನಿಗಳಿಂದ ಹಾಗೂ ಗಣ್ಯರಿಂದ ಶುಭಾಷಯಗಳು ಹರಿದುಬರುತ್ತಿವೆ. ಇದರ ನಡುವೆ ನಿನ್ನೆ ನವ ದಂಪತಿಗಳು ಆಂಧ್ರಪ್ರದೇಶದ ತಿರುಮಲ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿ, ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ನಯನತಾರಾ ಜೋಡಿ ದೇವಾಲಯಕ್ಕೆ ಭೇಟಿ ನೀಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಸಹ ಆಗಿತ್ತು. ಆದರೆ ಇದೀಗ ಈ ಜೋಡಿಗೆ ಸಂಕಷ್ಟ ಒಂದು ಎದುರಾಗಿದೆ. ಹೌದು, ತಿರುಮಲ ದೇವಸ್ಥಾನದ ಬೀದಿಗಳಲ್ಲಿ ನಯನತಾರಾ ಜೋಡಿ ಚಪ್ಪಲಿ ಧರಿಸಿ ತಿರುಗಾಡುತ್ತಿರುವ ವಿಡಿಯೋ ವೈರಲ್ ಆದ ನಂತರ ಟಿಟಿಡಿ ಪ್ರತಿಕ್ರಿಯಿಸಿದೆ. ಘಟನೆಯ ಬಗ್ಗೆ ಟಿಟಿಡಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದೆ.
ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ನಡೆ ಲಕ್ಷಾಂತರ ಭಕ್ತರ ಭಾವನೆಗಳಿಗೆ ಧಕ್ಕೆ ತರುವಂತಾಗಿದೆ. ಹೀಗಾಗಿ ನಯನತಾರಾಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಟಿಟಿಡಿ ಸಿವಿಎಸ್ಒ ನರಸಿಂಹ ಕಿಶೋರ್ ಹೇಳಿದ್ದಾರೆ. ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಟಿಟಿಡಿ ಸಿವಿಎಸ್ ಒ ಕಿಶೋರ್, ‘ನಯನತಾರಾ ದಂಪತಿ ದೇವಸ್ಥಾನದ ಬೀದಿಗಳಲ್ಲಿ ಚಪ್ಪಲಿ ಹಾಕಿಕೊಂಡು ನಡೆದಾಡಿರುವುದು ನಮ್ಮ ಗಮನಕ್ಕೆ ಬಂದಿದ್ದು, ಅಲ್ಲಿ ಫೋಟೋಶೂಟ್ ಆಯೋಜಿಸಿರುವುದು ವೀಡಿಯೋಗಳ ಮೂಲಕ ಸ್ಪಷ್ಟವಾಗುತ್ತಿದೆ. ಇದು ದೇವಸ್ಥಾನದ ನಿಯಮಗಳಿಗೆ ವಿರುದ್ಧವಾಗಿದೆ. ನಯನತಾರಾ ದಂಪತಿ ಭಕ್ತರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ‘ ಎಂದು ಹೇಳಿದ್ದಾರೆ.
ಟಿಟಿಡಿ ನಿಯಮಗಳ ಪ್ರಕಾರ ದೇವಸ್ಥಾನದ ಬೀದಿಗಳಲ್ಲಿ ಚಪ್ಪಲಿ ಧರಿಸಬಾರದು ಎಂಬ ನಿಯಮವಿದೆ. ಇದನ್ನು ಮೀರಿದ್ದರಿಂದ ನಯನತಾರಾಗೆ ನೋಟಿಸ್ ನೀಡಲಾಗುವುದು ಎಂದು ಟಿಟಿಡಿ ಸ್ಪಷ್ಟಪಡಿಸಿದೆ.ಇನ್ನು, ಘಟನೆಗೆ ಸಂಬಂಧಿಸಿದಂತೆ ನಯನತಾರಾ ಪತಿ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಪ್ರತಿಕ್ರಿಯಿಸಿದ್ದಾರೆ. ತಿರುಮಲದ ಮೇಲೆ ತಮ್ಮಲ್ಲಿ ಅಪಾರ ಭಕ್ತಿ ಮತ್ತು ನಂಬಿಕೆ ಇದೆ. ಮದುವೆಯ ನಂತರ ಸ್ವಾಮಿಯ ಆಶೀರ್ವಾದಕ್ಕಾಗಿ ಮಂಟಪದಿಂದ ಇಲ್ಲಿಗೆ ಬಂದಿದ್ದೆವು. ದೇವಸ್ಥಾನದ ಹೊರಗೆ ಭಕ್ತಾದಿಗಳ ದಂಡೇ ನೆರೆದಿದ್ದರಿಂದ ಎರಡನೇ ಬಾರಿಗೆ ಫೋಟೋ ತೆಗೆಯಲು ಬಂದಿದ್ದೆವು. ಈ ವೇಳೆ ಈ ಅಚಾತುರ್ಯ ಜರುಗಿದೆ. ತಪ್ಪಿಗಾಗಿ ವಿಷಾದಿಸುತ್ತೇವೆ ಎಂದು ಹೇಳಿದ್ದಾರೆ.