ಶಿರ್ವ, ಮೇ 8: ಕೊರೋನ ಲಾಕ್ಡೌನ್ ನಡುವೆ ಶಿರ್ವ ಠಾಣಾವ್ಯಾಪ್ತಿಯ ಕಳತ್ತೂರು ಗ್ರಾಮದ ಪಯ್ಯಾರು ಎಂಬಲ್ಲಿರುವ ಹಾಜಬ್ಬ ಎಂಬವರ ವಾಸ್ತವ್ಯ ಇಲ್ಲದ ಮನೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ದನವನ್ನು ಕಡಿದು ಮಾಂಸವನ್ನು ಮಾರಾಟಕ್ಕೆ ಸಿದ್ಧಪಡಿಸುತಿದ್ದ ಐವರನ್ನು ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಿದ ಶಿರ್ವ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಲ್ಲದೇ ಒಂದು ದನವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಕಳತ್ತೂರು ಸೂರ್ಯನಗರದ ಬದ್ರುದ್ದೀನ್(35), ಶೇಖ್ ಅಬ್ದುಲ್ಲಾ (42), ಕಲ್ಯಾ ಭರತನಗರದ ಲವ ಶೆಟ್ಟಿ (57), ಕಳತ್ತೂರಿನ ಹನೀಫ್ ಹಾಗೂ ಬೆಳಪುವಿನ ಇಮ್ತಿಯಾಜ್ ಎಂದು ಗುರುತಿಸಲಾಗಿದೆ.
ಇವರಿಂದ 80-85 ಕೆ.ಜಿ.ದನದ ಮಾಂಸದ ಪ್ಯಾಕೇಟ್ಗಳು, ದನ ಕಡಿಯಲು ಬಳಸಿದ ಆಯುಧಗಳು, ತೂಕ ಮಾಡುವ ಸ್ಕೇಲ್, ದನವನ್ನು ಕಟ್ಟಿದ ಹಗ್ಗ, ಪ್ಲಾಸ್ಟಿಕ್ ಬುಟ್ಟಿ, ಸಾಗಾಟಕ್ಕೆ ಬಳಸಲು ನಿಲ್ಲಿಸಿದ ವಾಹನಗಳು, ಮೋಟಾರು ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.