ಅಂಕೋಲಾ: ಶಿರೂರು ಗುಡ್ಡ ಕುಸಿತದಲ್ಲಿ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಮತ್ತು ಆತನ ಬೆಂಜ್ ಲಾರಿ ಪತ್ತೆ ಹಚ್ಚಿದ ಬಳಿಕ ಮತ್ತೆ ಗಂಗಾವಳಿ ನದಿಯಲ್ಲಿ ಡ್ರೆಜ್ಜಿಂಗ್ ಕಾರ್ಯಾಚರಣೆ ಮುಂದುವರೆದಿದೆ.
ಅರ್ಜುನ್ ಬಳಸುತ್ತಿದ್ದ ಎಲ್ಲಾ ಸಾಮಗ್ರಿ ಗಳನ್ನು ಕೂಡ ಲಾರಿಯಲ್ಲಿದ್ದ ಹೊರತೆಗೆಯಲಾಗಿದ್ದು, ತನ್ನ ದಿನನಿತ್ಯ ಊಟಕ್ಕಾಗಿ ಅರ್ಜುನ್ ಬಳಸುತ್ತಿದ್ದ ಪಾತ್ರೆಗಳು ಸೇರಿದಂತೆ ಎರಡು ಮೊಬೈಲ್ಗಳು ಸಿಕ್ಕಿವೆ. ಇದರ ಜತೆಗೆ ತನ್ನ ಮಗನಿಗಾಗಿ ಖರೀದಿಸಿದ ಚಿಕ್ಕ ಆಟಿಕೆಯ ಲಾರಿಯೊಂದು ಬೆಂಜ್ ಲಾರಿಯೊಳಗೆ ಸಿಕ್ಕಿದೆ.
ಮತ್ತೆ ಗಂಗಾವಳಿ ನದಿಯಲ್ಲಿ ಡ್ರೆಜ್ಜಿಂಗ್ ಕಾರ್ಯಾಚರಣೆ ಮುಂದುವರೆದಿದ್ದು, ದುರ್ಘಟನೆಯಲ್ಲಿ ಕಣ್ಮರೆಯಾದ ಶಿರೂರು ಗ್ರಾಮದ ಜಗನ್ನಾಥ ನಾಯ್ಕ, ಗಂಗೆಕೊಳ್ಳದ ಲೋಕೇಶ ನಾಯ್ಕ ಅವರ ಹುಡುಕಾಟವು ನಡೆದಿದೆ. ಲಕ್ಷ್ಮಣ ನಾಯ್ಕ ಹೊಟೇಲ್ ಬಳಿ ಬಿದ್ದಿರುವ ಮಣ್ಣಿನ ರಾಶಿಯನ್ನು ಗುರುವಾರ ತೆರವು ಮಾಡಲಾಗುತ್ತಿದ್ದು, ಅಲ್ಲಿಯೇ ಇವರಿಬ್ಬರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಜಗನ್ನಾಥ ಮತ್ತು ಲೋಕೇಶ ಕುಟುಂಬವು ಸ್ಥಳದಲ್ಲಿ ತಮ್ಮವರಿಗಾಗಿ ಕಾಯುತ್ತಿದ್ದರೆ ಎನ್ನಲಾಗಿದೆ.