ಚಿಕ್ಕೋಡಿ: ರಾಜರತ್ನ ಪುನೀತ್ ರಾಜಕುಮಾರ್ ಸಾವನ್ನಪ್ಪಿ 6 ತಿಂಗಳು ಕಳೆಯುತ್ತಾ ಬಂದರೂ ಪುನೀತ್ ಮೇಲಿನ ಅಭಿಮಾನ ಮಾತ್ರ ಮರೆಯಾಗಿಲ್ಲ. ಪುನೀತ್ ರಾಜಕುಮಾರ್ ಅವರ ಅಪ್ಪಟ್ಟ ಅಭಿಮಾನಿಯೋರ್ವ ತನ್ನ ವಿವಾಹದ ದಿನದಂದು ರಾಜರತ್ನನಿಗೆ ವಿಭಿನ್ನವಾಗಿ ನಮನ ಸಲ್ಲಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದ ನಿವಾಸಿಯಾಗಿರುವ ಆನಂದ ಪಟ್ಟಣ ಹಾಗೂ ಜ್ಯೋತಿ ಎನ್ನುವ ಯುವ ಜೋಡಿ ಪುನೀತ್ ಅವರ ನೆನಪಿನಲ್ಲಿ ವಿಶೇಷವಾಗಿ ವಿವಾಹವಾಗಿದ್ದಾರೆ.
ರಾಯಬಾಗ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆದ ವಿವಾಹ ಸಮಾರಂಭ ಸಂಪೂರ್ಣವಾಗಿ ಪುನೀತಮಯವಾಗಿತ್ತು. ಮದುವೆ ಸಮಾರಂಭ ನಡೆಯುವ ಕಲ್ಯಾಣ ಮಂಟಪ ಪುನೀತ್ ಭಾವಚಿತ್ರಗಳಿಂದ ರಾರಾಜಿಸುತ್ತಿತ್ತು. ಮದುವೆ ಸಮಾರಂಭದ ವೇದಿಕೆಯಲ್ಲೂ ಪುನೀತ್ ಭಾವಚಿತ್ರವನ್ನ ಹೂವಿನ ಅಲಂಕಾರದಿಂದ ಶೃಂಗಾರ ಮಾಡಲಾಗಿತ್ತು. ಇನ್ನೂ ವಿಶೇಷ ವೆಂದರೇ ಈ ಯುವ ಜೋಡಿಗಳು ಅರುಂಧತಿ ನಕ್ಷತ್ರ ನೋಡುವ ಬದಲು ಪುನೀತ್ ಭಾವಚಿತ್ರವನ್ನ ನೋಡಿ ನವ ಜೀವನಕ್ಕೆ ಕಾಲಿಟ್ಟಿದ್ದು.ಹೌದು ಬಹುತೇಕ ಮದುವೆ ಸಮಾರಂಭಗಳಲ್ಲಿ ನವ ವಧು ವರರು ಅರುಂಧತಿ ನಕ್ಷತ್ರ ನೋಡುವದು ವಾಡಿಕೆ. ಆದರೆ ಈ ಜೋಡಿ ಪುನೀತ್ ಭಾವಚಿತ್ರವನ್ನೆ ಅರುಂಧತಿ ನಕ್ಷತ್ರ ಎಂದು ನೋಡಿ ಆಶೀರ್ವಾದ ಪಡೆದರು. ಪುನೀತ್ ಅಪ್ಪಟ ಅಭಿಮಾನಿಯಾಗಿರುವ ಆನಂದಾಗೆ ಆತನ ಸ್ನೇಹಿತರು ಪುನೀತ್ ಭಾವಚಿತ್ರ ಇರುವ ವಿವಿಧ ಉಡುಗೊರೆಗಳನ್ನು ನೀಡಿ ಸಂತಸಪಟ್ಟರು. ಆನಂದ ಪಟ್ಟಣ ಅವರ ಸ್ನೇಹಿತರು ಪುನೀತ್ ಹಾಡುಗಳನ್ನ ಹಾಡಿ ಮದುವೆಗೆ ಮತ್ತಷ್ಟು ಕಳೆ ತಂದರು. ಇನ್ನೂ ಮದುವೆ ನಂತರ ಪುನೀತ್ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.
ಪುನೀತರ ಅಪ್ಪಟ ಅಭಿಮಾನಿ ಆನಂದ ಪಟ್ಟಣ ಅವರ ಮದುವೆ ಸಂಪೂರ್ಣ ಪುನೀತ್ ಮಯವಾಗಿತ್ತು. ಪುನೀತ್ ಎಲ್ಲೂ ಹೋಗಿಲ್ಲ ನಮ್ಮ ಮನದಲ್ಲೆ ಇದ್ದಾರೆ ಎನ್ನುವದಕ್ಕೆ ಈ ಮದುವೆ ಸಾಕ್ಷಿಯಾಗಿತ್ತು.