ಮೈಸೂರು: ಶಾಲಾ ಫೀಸ್ ಕಟ್ಟಿಲ್ಲ ಎಂದು ಮಕ್ಕಳನ್ನು ಶಾಲಾ ಆಡಳಿತ ಮಂಡಳಿಯವರು ಸುಡು ಬಿಸಿಲಿನಲ್ಲೇ ಹೊರಗೆ ಕೂರಿಸಿದ ಘಟನೆ ಮೈಸೂರು ಜಿಲ್ಲೆ ಕೆ.ಆರ್.ನಗರದಲ್ಲಿ ನಡೆದಿದೆ.
ಕೆ.ಆರ್.ನಗರದ ವಾಸವಿ ಸೆಂಟ್ರಲ್ ಸ್ಕೂಲ್ ನ ಆಡಳಿತ ಮಂಡಳಿಯವರು ಶಾಲಾ ಶುಲ್ಕ ಪಾವತಿಸಿಲ್ಲ ಎಂದು ಸುಮಾರು 20 ರಿಂದ 25 ವಿದ್ಯಾರ್ಥಿಗಳನ್ನು ಇಂದು ಬೆಳಗ್ಗೆಯಿಂದಲೇ ವಾರ್ಷಿಕ ಪರೀಕ್ಷೆ ಬರೆಯೋದಕ್ಕೂ ಅವಕಾಶ ನೀಡದೇ ಬಿಸಿಲಿನಲ್ಲೇ ಕೂರಿಸಿ ಅವಮಾನ ಮಾಡಿದ್ದಾರೆ. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವಿಷಯ ತಿಳಿದ ಕೆಲವು ಪೋಷಕರು ಶಾಲೆಗೆ ಆಗಮಿಸಿ ಆಡಳಿತ ಮಂಡಳಿ ವಿರುದ್ಧ ಪ್ರತಿಭಟಿಸಿದ್ದಾರೆ. ನಾವು ಈಗಾಗಲೇ ನಿಗದಿ ಪಡಿಸಿರುವ 35 ಸಾವಿರ ರೂ. ಶುಲ್ಕ ಪಾವತಿಸಿದ್ದೇವೆ. ನಿಮ್ಮ ಶಾಲಾ ಕಟ್ಟಡ ಅಭಿವೃದ್ಧಿ ಶುಲ್ಕ ಮಾತ್ರ ಬಾಗಿ ಉಳಿಸಿಕೊಂಡಿದ್ದೇವೆ. ನಾವು ಅದನ್ನು ಕಟ್ಟುವುದಿಲ್ಲ ಎಂದು ಹೇಳುತ್ತಿಲ್ಲ, ನಮಗೆ ಸ್ವಲ್ಪ ಕಾಲಾವಕಾಶ ಬೇಕು ಎಂದು ಈಗಾಗಲೇ ಹೇಳಿದ್ದೇವೆ. ಆದರೂ ನೀವು ನಮ್ಮ ಮಕ್ಕಳನ್ನು ಈ ರೀತಿ ಹೊರಗೆ ನಿಲ್ಲಿಸಿರುವುದು ಅತ್ಯಂತ ಅಮಾನವೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.