ಬೆಂಗಳೂರು: ಜೀ ಕನ್ನಡದ ಪ್ರಸಿದ್ಧ ಸಿಂಗಿಂಗ್ ರಿಯಾಲಿಟಿ ಶೋ ‘ಸರಿಗಮಪ’ದಲ್ಲಿ ಸ್ಪರ್ಧಿಸಿದ್ದ ಪೊಲೀಸ್ ಪೇದೆ ಸುಬ್ರಮಣಿ ಪತ್ನಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರು ಹೊರವಲಯದ ಹೊಸಕೋಟೆ ಯ ಖಾಸಗಿ ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾರೆ.
ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ಕೋಲಾರ ತಾಲೂಕಿನ ಶಾನಬೋಗನಹಳ್ಳಿ ಮೂಲದ ಸುಬ್ರಮಣಿ ಅವರ ಪತ್ನಿ ಜ್ಯೋತಿ ಸುಬ್ರಮಣಿ (30) ಮೃತ ದುರ್ದೈವಿ.
ಕಳೆದ ಒಂದು ವಾರದ ಹಿಂದೆ ಇವರಿಗೆ ಕೊರೋನಾ ಪಾಸಿಟಿವ್ ಆಗಿತ್ತು. ಎರಡು ದಿನದ ಹಿಂದೆ ತೀವ್ರ ಉಸಿರಾಟದ ಸಮಸ್ಯೆ ಕಂಡು ಬಂದಾಗ ವೆಂಟಿಲೇಟರ್ ಬೆಡ್ ಸಿಗದೆ ಪರದಾಡಿದ್ದ ಸಿಂಗರ್ ಸುಬ್ರಮಣಿ ಅವರಿಗೆ ಪತ್ನಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಬೆಂಗಳೂರಿನ ಯಾವ ಆಸ್ಪತ್ರೆಯಲ್ಲೂ ವೆಂಟಿ ಲೇಟರ್ ಬೆಡ್ ಸಿಗಲಿಲ್ಲ. ಕೊನೆಗೆ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಸುಬ್ರಮಣಿ ಅವರು ಪೊಲೀಸ್ ಪೇದೆ ಮಾತ್ರವಲ್ಲದೆ ಉತ್ತಮ ಗಾಯಕರು ಆಗಿದ್ದಾರೆ. ಸರಿಗಮಪ ಶೋನಲ್ಲಿ ಭಾಗವಹಿಸಿದ ಬಳಿಕ ಅವರಿಗೆ ಒಳ್ಳೆಯ ಹೆಸರು ಬಂದಿತ್ತು. ಒಂದು ಎಪಿಸೋಡ್ನಲ್ಲಿ ಸುಬ್ರಮಣಿಪತ್ನಿ ಜ್ಯೋತಿ ಅವರು ಸಹ ಪಾಲ್ಗೊಂಡಿದ್ದರು. ಇನ್ನು ಕರೊನಾ ಸಂಕಷ್ಟದ ಸಮಯದಲ್ಲಿ ಹಾಡಿನ ಮೂಲಕ ಜಾಗೃತಿಯನ್ನು ಸಹ ಸುಬ್ರಮಣಿ ಅವರು ಮೂಡಿಸಿದ್ದರು. ಅನೇಕ ಸುದ್ದಿ ಮಾಧ್ಯಮಗಳಲ್ಲಿಯು ಸಂದರ್ಶನ ನೀಡಿರುವ ಸುಬ್ರಮಣಿ ಗಾಯನದಿಂದಲೇ ಜನಮನ್ನಣೆ ಪಡೆದುಕೊಂಡಿದ್ದಾರೆ.