ಬೆಂಗಳೂರು : ನಿನ್ನೆಯಿಂದ ನಟಿ ಸಂಜನಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬ ವಿಚಾರ ಭಾರೀ ಚರ್ಚೆಯಾಗುತ್ತಿದೆ. ಹೀಗಿರುವಾಗಲೇ 2018ರಲ್ಲಿ ಇಬ್ಬರು ಜೊತೆ ಬಂದಿದ್ದ ಸಂಜನಾ ಗಲ್ರಾನಿ ಸ್ವಇಚ್ಛೆಯ ಮೇರೆಗೆ ಮತಾಂತರ ಆಗಿದ್ದಾರೆ ಎಂದು ಬೆಂಗಳೂರಿನ ಟ್ಯಾನಿ ರಸ್ತೆಯ ಅರೆಬಿಕ್ ಮದರಸದ ಧರ್ಮ ಗುರು ಮಹಮ್ಮದ್ ಜಲಾಲುದ್ದಿನ್ ಹೇಳಿದ್ದಾರೆ.
ಅರ್ಚನಾ ಗರ್ಲಾನಿ 09-10-2018 ರಂದು ಬೆಂಗಳೂರಿನ ನಿವಾಸಿಗಳಾದ ಇಮ್ತಿಯಾಜ್ ಅಹ್ಮದ್ ಮತ್ತು ಅಸ್ಲಂ ಪಾಷಾ ಎಂಬವರ ಜೊತೆಗೆ ಬಂದು ನನ್ನನ್ನ ಭೇಟಿಯಾದರು. ಕೋರ್ಟ್ ಅಫಿಡವಿಟ್ ಸಹಾ ತಗೆದುಕೊಂಡು ಬಂದಿದ್ದರು. ಇಸ್ಲಾಂನ ತತ್ವ ಆದರ್ಶಗಳನ್ನ ಒಪ್ಪಿಕೊಂಡು ಇಸ್ಲಾಂ ಧರ್ಮ ಸ್ವೀಕರಿಸಲು ಬಂದಿದ್ದೇನೆ ಎಂದರು. ಯಾವುದೇ ಒತ್ತಡ ಇಲ್ಲದೆ ಮತಾಂತರ ಆಗುತಿದ್ದೇನೆ ಎಂದರು. ನಾವು ಸಹ ಕೋರ್ಟ್ ಅಫಿಡವಿಟ್ ಇಲ್ಲದೇ ಮತಾಂತರ ಕಾರ್ಯಕ್ಕೆ ಮುಂದಾಗಲ್ಲ. ನಾನೇ ಅವರನ್ನ ಇಸ್ಲಾಂ ಧರ್ಮ ಸ್ವೀಕಾರದ ಕಾರ್ಯ ನೆರವೇರಿಸಿದೆ ಎಂದು ಧರ್ಮ ಗುರು ಮಹಮ್ಮದ್ ಜಲಾಲುದ್ದಿನ್ ಹೇಳಿದ್ದಾರೆ.
ಇಸ್ಲಾಂ ಧರ್ಮ ಸ್ವೀಕಾರದ ಬಳಿಕ ಅವರಿಗೆ ಎಲ್ಲ ಮಾಹಿತಿ ನೀಡುತ್ತೇವೆ. ಅವರು ನಮಾಜ್, ಹಜ್, ಜಕಾತ್, ರೋಜಾ, ಕಲ್ಮಾ ಎಲ್ಲವನ್ನು ಒಪ್ಪಿಕೊಂಡಿದ್ದರು. ನಾನು ಸ್ವಇಚ್ಛೆಯ ಮೇರೆಗೆ ಮತಾಂತರ ಆಗುತ್ತೇನೆ ಎಂದು ಹೇಳಿರೋದು ದಾಖಲೆಗಳಲ್ಲಿದೆ. ಮತಾಂತರಗೊಳ್ಳಲು ಆಗಮಿಸುವ ಜನರ ದಾಖಲಾತಿ ಕೇಳುತ್ತೇವೆ. ನಮಗೂ ಅವರ ಬಗ್ಗೆ ಹೆಚ್ಚಿನ ಮಾಹಿತಿ ಇರಲ್ಲ. ಮದುವೆ ಬಗ್ಗೆ ಯಾವುದೇ ಪ್ರಸ್ತಾಪ ಮಾಡಲಿಲ್ಲ. ಮತಾಂತರಗೊಂಡ ನಂತರ ನಾವು ಅವರಿಗೆ ಬದಲಾದ ಧರ್ಮ ಮತ್ತು ಹೆಸರಿನ ಕುರಿತು ದೃಢೀಕರಣದ ದಾಖಲೆಗಳನ್ನು ನೀಡುತ್ತೇವೆ. ಎಲ್ಲ ದಾಖಲೆಗಳಲ್ಲಿ ಮತಾಂತರಗೊಂಡ ವ್ಯಕ್ತಿಯ ಸಹಿ ಪಡೆದುಕೊಳ್ಳುತ್ತೇವೆ.
ಇಲ್ಲಿಂದ ಬಂದ ಹೋದ ಮೇಲೆ ಸಂಜನಾ ಏನು ಮಾಡಿದ್ರು ಅನ್ನೋದು ನಮಗೆ ಗೊತ್ತಿಲ್ಲ. ಈ ರೀತಿಯ ಕೆಟ್ಟ ಕೆಲಸಗಳಿಂದ ದೂರವಾಗಲಿ, ಅವರು ಮನಸ್ಸು ಪರಿವರ್ತನೆಯಾಗಲಿ ಎಂದು ನಾವು ಅಲ್ಲಾನಲ್ಲಿ ಪ್ರಾರ್ಥಿಸುತ್ತೇವೆ. ತಾನು ಮಾಡಿದ ಕೆಲಸ ಕೆಟ್ಟದ್ದು ಅಂದು ಪ್ರಾಯಶ್ಚಿತವಾಗಿ ಕಣ್ಣೀರು ಹಾಕಿ ಪ್ರಾರ್ಥಿಸಿದ್ರೆ ಅಲ್ಲಾನ ಕ್ಷಮೆಗೆ ಪಾತ್ರರಾಗುತ್ತಾರೆ ಎಂದು ಅವರು ಹೇಳಿದ್ದಾರೆ.