ಬೆಂಗಳೂರು;ಶಾಲಾ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯನ್ನು ವಿಸರ್ಜಿಸಿದ್ದಕ್ಕೆ ಸರಕಾರದ ವಿರುದ್ಧ ರೋಹಿತ್ ಚಕ್ರತೀರ್ಥ ತಿರುಗಿಬಿದ್ದು ಅಸಮಾಧಾನ ಹೊರಹಾಕಿದ್ದಾರೆ.
ಸಂಶೋಧಕನಿಗೆ ಸತ್ಯವೇ ಮುಖ್ಯವಾಗುತ್ತದೆ ಮತ್ತು ಅದಕ್ಕಾಗಿ ಆತ ಜಗತ್ತನ್ನೇ ಎದುರು ಹಾಕಿಕೊಳ್ಳಲು ಸಿದ್ಧವಾಗಿರುತ್ತಾನೆ. ರಾಜಕೀಯ ಪಕ್ಷ ಅಥವಾ ಸರ್ಕಾರಗಳಿಗೆ ಅಂತಿಮವಾಗಿ ಮುಖ್ಯವಾಗುವುದು ಮತಗಳು. ಸತ್ಯ ಮತ್ತು ಮತ ಎಂಬ ಹಾದಿಯ ನಡುವೆ ಸಂಶೋಧಕ ಸತ್ಯವನ್ನು ಆಯ್ದುಕೊಂಡರೆ ರಾಜಕೀಯ ಶಕ್ತಿ ಎರಡನೇಯದನ್ನು ಆಯ್ದುಕೊಳ್ಳುತ್ತದೆ ಎಂದು ನೇರವಾಗಿ ರೋಹಿತ್ ಚಕ್ರತೀರ್ಥ ರಾಜ್ಯ ಸರ್ಕಾರ ಮತದ ಆಸೆಗಾಗಿ ತನ್ನನ್ನು ಸಮಿತಿಯಿಂದ ಕೈಬಿಟ್ಟಿದೆ ಎಂದು ಆರೋಪಿಸಿದ್ದಾರೆ.
ತನಗೆ ಬೇಕಾದಂತೆ ಇತಿಹಾಸ ಬರೆಯುವುದು ಎಷ್ಟು ಅರ್ಥಹೀನವೋ ಅಷ್ಟೇ ಅರ್ಥಹೀನವಾದದ್ದು ಬೇರೆಯವರಿಗೆ ಬೇಕಾದಂತೆ ಇತಿಹಾಸ ಬರೆಯುತ್ತೇನೆ ಎನ್ನುವಂತದ್ದು. ಇತಿಹಾಸಕ್ಕೆ ನಿಷ್ಠವಾಗಿ ಇತಿಹಾಸವನ್ನು ಬರೆಯಬೇಕೆಂಬ ನನ್ನ ತತ್ವ ಇವರೆಡಕ್ಕೂ ಸೇರದ್ದು ಹೀಗಾಗಿ ವಿಸರ್ಜನೆಯಾದ ಮೇಲೂ ಅಲ್ಲಿ ಉಳಿಯದೇ ನನ್ನ ಕೆಲಸಕ್ಕೆ ಮರಳಿದ್ದೇನೆ ಎಂದು ಚಕ್ರತೀರ್ಥ ಪೋಸ್ಟ್ ಹಾಕಿದ್ದಾರೆ.