ಬೆಂಗಳೂರು: ಆಗಸ್ಟ್ 29ಕ್ಕೆ ಮೈಸೂರು ಜಿಲ್ಲಾಧಿಕಾರಿಯಾಗಿ ಬಿ.ಶರತ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಕೇವಲ ಒಂದೇ ಒಂದು ತಿಂಗಳಿನಲ್ಲಿಯೇ ಇದೀಗ ಅವರನ್ನು ವರ್ಗಾವಣೆ ಮಾಡಿರುವಂತ ರಾಜ್ಯ ಸರ್ಕಾರ, ಅವರ ಸ್ಥಾನಕ್ಕೆ ರೋಹಿಣಿ ಸಿಂಧೂರಿ ಅವರನ್ನು ನೇಮಕ ಮಾಡಿ ಆದೇಶಿಸಿದೆ.
ರಾಜ್ಯ ಸರ್ಕಾರ, ಧಾರ್ಮಿಕ ಮತ್ತು ಚಾರಿಟಬಲ್ ಎಂಡೋಮೆಂಟ್ ನ ಕಮೀಷನರ್ ಆಗಿದ್ದಂತ ರೋಹಿಣಿ ಸಿಂಧೂರಿಯವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ಇಂದು ವರ್ಗಾವಣೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.
ಆಗಸ್ಟ್ 29 ರಂದು ಕಲಬುರಗಿಯಿಂದ ಮೈಸೂರು ಜಿಲ್ಲಾಧಿಕಾರಿಯಾಗಿ ಬಿ ಶರತ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಈಗ ಒಂದು ತಿಂಗಳು ತುಂಬುವ ಮೊದಲೇ ಶರತ್ ಅವರನ್ನು ಸ್ಥಳ ನಿಯುಕ್ತಿಗೊಳಿಸದೇ ವರ್ಗಾವಣೆ ಮಾಡಲಾಗಿದೆ.
ರಾಜೇಂದ್ರ ಚೋಳನ್ ಅವರನ್ನು ಬೆಂಗಳೂರು ಸ್ಮಾರ್ಟ್ ಸಿಟಿ ನಿಗಮದ ವ್ಯವಸ್ಥಾಪ ನಿರ್ದೇಶಕರಾಗಿ ವರ್ಗಾವಣೆಗೊಂಡರೆ, ಬಿಬಿಎಂಪಿಯ ಆಸ್ತಿ ವಿಭಾಗದ ವಿಶೇಷ ಆಯುಕ್ತರಾಗಿರುವ ಜೆ. ಮಂಜುನಾಥ್ ಅವರನ್ನು ಬಿಬಿಎಂಪಿಯ ಆಡಳಿತ ವಿಭಾಗದ ವಿಶೇಷ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ಬೆಂಗಳೂರು ಸ್ಮಾರ್ಟ್ ಸಿಟಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸ್ಥಾನದಲ್ಲಿದ್ದ ಹೆಪ್ಸಿಬಾ ರಾಣಿ ಕೊರ್ಲಪತಿ ಅವರನ್ನು ಮುಂದಿನ ಆದೇಶದ ವರೆಗೆ ಬಿಬಿಎಂಪಿಯ ಆಸ್ತಿ ವಿಭಾಗದ ವಿಶೇಷ ಆಯುಕ್ತರಾಗಿ ನಿಯೋಜನೆಗೊಂಡಿದ್ದಾರೆ.
ರಾಜ್ಯ ರೇಷ್ಮೆ ಮಾರುಕಟ್ಟೆ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎಂ. ಆರ್ ರವಿ ಕುಮಾರ್ ಅವರನ್ನು ಕೋಲಾರ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ನೇಮಕಗೊಂಡಿದ್ದಾರೆ. ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕ ಪಿ ಶಿವಶಂಕರ್ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ನೇಮಿಸಲಾಗಿದೆ.