ಬೆಳ್ತಂಗಡಿ : ರಬ್ಬರ್ ಟ್ಯಾಪಿಂಗ್ ಕೆಲಸಕ್ಕಿದ್ದವರು ತನ್ನ ಮಾಲಕನನ್ನೇ ದರೋಡೆ ಮಾಡಿದ ಘಟನೆ ಮಾ.30 ರಂದು ಪಡಂಗಡಿ ಗ್ರಾಮದ ಜಾನೆಬೈಲು ಎಂಬಲ್ಲಿ ನಡೆದಿತ್ತು.
ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಜಾನೆಬೈಲು ಪುತ್ಯೆಮನೆ ನಿವಾಸಿ ದಿ. ಮೊರ್ತಿನ್ ಗೋವಿಯಸ್ರವರ ಪುತ್ರ ಜುವಾಮ್ ಗೋವಿಯಸ್ ಎಂಬವರು ಮಾ.30ರಂದು ರಾತ್ರಿ ಸುಮಾರು 8 ಗಂಟೆ ವೇಳೆಗೆ ತನ್ನ ಮನೆಯ ಬಳಿ ಇರುವ ರಬ್ಬರ್ ಪ್ರೊಸಸಿಂಗ್ ಶೆಡ್ ಬಳಿ ಪುತ್ರ ಐಸಾಕ್ ಅಲೈಸ್ ಗೋವಿಯಸ್ ಜೊತೆ ಮೊಬೈಲ್ ಫೋನಿನಲ್ಲಿ ಮಾತನಾಡುತ್ತಿದ್ದ ಸಂದರ್ಭ ಅವರ ಮನೆಯಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಮುಹಮ್ಮದ್ ರಿಯಾಸುದ್ದಿನ್ ಮತ್ತು ಪೈಸಲ್ ಎಂಬವರು ಕಟ್ಟಿಗೆ ಮತ್ತು ಕೋಲಿನಿಂದ ಕಾಲು, ಕೈ, ಹಣೆ, ಎದೆ ಬಾಗಕ್ಕೆ ಸೇರಿದಂತೆ ಹಲವು ಕಡೆ ಹಲ್ಲೆ ನಡೆಸಿದ್ದು, ಈ ಸಂದರ್ಭ ಕೆಳಗೆ ಬಿದ್ದ ಜುವಾಮ್ ಗೋವಿಯಸ್ ಅವರ ಕಾಲುಗಳನ್ನು ಲುಂಗಿಯಿಂದ ಕಟ್ಟಿಹಾಕಿ ಅವರಲ್ಲಿದ್ದ ಮೊಬೈಲನ್ನು ಕಿತ್ತುಕೊಂಡು ಶಾಲಿನಿಂದ ಕುತ್ತಿಗೆಯನ್ನು ಬಿಗಿದು ಹೆದರಿಸಿ ಗೂಗಲ್ ಪೇ ಪಿನ್ ನಂಬರ್ ಪಡೆದು ಅವರ ಖಾತೆಯಲ್ಲಿದ್ದ 82 ಸಾವಿರ ರೂಪಾಯಿ ಹಣವನ್ನು ಆರೋಪಿಗಳು ತಮ್ಮ ಹೆಂಡತಿಯರ ಹೆಸರಿನ ಖಾತೆಗೆ ವರ್ಗಾಯಿಸಿಕೊಂಡಿದ್ದು, ಮೊಬೈಲ್ ಮತ್ತು ಅಂಗಳದಲ್ಲಿ ನಿಲ್ಲಿಸಿದ್ದ 2 ಲಕ್ಷದ 82 ಸಾವಿರ ರೂಪಾಯಿ ಬೆಲೆಬಾಳುವ ಮಹೀಂದ್ರಾ ಇಲೆಕ್ಟ್ರಿಕ್ ಮೊಬಾಲಿಟಿ ತ್ರಿಚಕ್ರ ವಾಹನವನ್ನು ಕಳವು ಮಾಡಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 324, 506 ಮತ್ತು 394 ರಂತೆ ಪ್ರಕರಣ ದಾಖಲಾಗಿತ್ತು.ಪ್ರಕರಣ ದಾಖಲಿಸಿಕೊಂಡ ಬೆಳ್ತಂಗಡಿ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದು, ಎ.7ರಂದು ಆರೋಪಿಗಳಾದ ಕೇರಳದ ಮಲ್ಲಪುರಂ ಜಿಲ್ಲೆಯ ಕರಿವಾರಕುಂಡು ನಿರಾಂಬರ್ ತಾಲೂಕಿನ ಪುಲ್ವೆಟ್ಟ ಗ್ರಾಮದ ನಿವಾಸಿಗಳಾದ ಮುಹಮ್ಮದ್ ರಿಯಾಸುದ್ದಿನ್ (47) ಹಾಗೂ ಪೈಸಲ್ (45) ಎಂಬವರನ್ನು ವೇಣೂರು ಬಸ್ ನಿಲ್ದಾಣದಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ. ಬೆಳ್ತಂಗಡಿ ಇನ್ಸ್ಪೆಕ್ಟರ್ ಸತ್ಯನಾರಾಯಣ ನೇತೃತ್ವದಲ್ಲಿ ಸಬ್ ಇನ್ಸ್ಪೆಕ್ಟರ್ ಅರ್ಜುನ್ ಮತ್ತು ಇನ್ಸ್ಪೆಕ್ಟರ್ ಹರೀಶ್ ತಂಡದ ಸಿಬ್ಬಂದಿ ಬೆನ್ನಿಚ್ಚನ್, ಬಸವರಾಜ್, ಚರಣ್ ರಾಜ್ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.