ಚಿಕ್ಕಮಗಳೂರು : ಜಿಲ್ಲೆಯ ಕಳಸ ತಾಲೂಕಿನ ಮಾವಿನಹೊಲ ಗ್ರಾಮದ ಬಳಿ ಸುಮಾರು 3 ಕೋಟಿ ಮೌಲ್ಯದ ಕಾಂಕ್ರಿಟ್ ರಸ್ತೆ ಒಂದು ತಿಂಗಳ ಹಿಂದೆ ನಿರ್ಮಾಣಗೊಂಡಿತ್ತು. ರಸ್ತೆಯನ್ನು ಶಾಸಕರೇ ಉದ್ಘಾಟಿಸಬೇಕು, ಅಲ್ಲಿಯವರೆಗೂ ಸಂಚಾರಕ್ಕೆ ಅವಕಾಶವಿಲ್ಲ ಎಂದು ಶಾಸಕರ ಬೆಂಬಲಿಗರು ರಸ್ತೆಗೆ ಬೇಲಿಯನ್ನು ಹಾಕಿದ್ದು, ಸ್ಥಳೀಯರು ಈ ಬೇಲಿಯನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಂಡಿದ್ದಾರೆ.
ಕಾಂಕ್ರೀಟ್ ರಸ್ತೆಯ ಉದ್ಘಾಟನೆಯನ್ನು ಶಾಸಕರೇ ಮಾಡಬೇಕೆಂದು ಸ್ಥಳೀಯ ಗ್ರಾಮ ಪಂಚಾಯಿತಿಯ ಸದಸ್ಯರು ಪಟ್ಟು ಹಿಡಿದು ರಸ್ತೆಗೆ ಬೇಲಿ ಹಾಕಿ, ಬಂಡೆ ಕಲ್ಲುಗಳನಿಟ್ಟು, ಬ್ಯಾರಿಕೇಡ್ ಜೋಡಿಸಿ, ಬೀಗ ಹಾಕಿದ್ದಾರೆ ಎಂದು ಸ್ಥಳೀಯ ಆರೋಪಿಸಿದ್ದರು. ಈ ಬಗ್ಗೆ ಸ್ಥಳೀಯರು ಸರಕಾರದ ವಿರುದ್ಧವು ಅಸಮಾಧಾನ ಹೊರಹಾಕಿದ್ದಾರೆ.
ರಸ್ತೆಗೆ ಬೇಲಿ ಹಾಕಿದ್ದರ ಪರಿಣಾಮವಾಗಿ ಸ್ಥಳೀಯರು 6.ಕಿ.ಮೀ ದೂರದ ದಾರಿಯನ್ನು 15-20 ಕಿ.ಮೀ ಸುತ್ತಿಕೊಂಡು ಬರಬೇಕಾಯಿತು. ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಜನ ತೀವ್ರ ಸಂಕಷ್ಟ ಪಡಬೇಕಾಯಿತು.
ಈ ಹಿನ್ನೆಲೆಯಲ್ಲಿ ಗುರುವಾರ ಮಳೆ ಸುರಿಯುತ್ತಿದ್ದರು ಸ್ಥಳೀಯರು ತಂತಿಬೇಲಿಯನ್ನು ಕಿತ್ತುಹಾಕಿ, ರಸ್ತೆಗೆ ಅಡ್ಡಲಾಗಿ ಇಟ್ಟಿದ ಬಂಡೆಯನ್ನು ರಸ್ತೆಯ ಮತ್ತೊಂದು ಬದಿಗೆ ಉರುಳಿಸಿ ತಮ್ಮ ದಾರಿಯನ್ನು ತಾವೇ ಕಂಡುಕೊಡಿದ್ದಾರೆ. ಬಿಜೆಪಿ ಸದಸ್ಯರ ಈ ವರ್ತನೆಗೆ ತಾಲೂಕು ಕಾಂಗ್ರೆಸ್ ಹಾಗೂ ಜೆಡಿಎಸ್ ಘಟಕ ಕೂಡ ಅಸಮಾಧಾನ ಹೊರಹಾಕಿದ್ದಾರೆ.