
ನೆಲ್ಯಾಡಿ: ನಿನ್ನೆಯಷ್ಟೇ ರಾಷ್ಟ್ರೀಯ ಹೆದ್ದಾರಿ 75ರ ಎಂಜಿರ ಸಮೀಪದ ಪರಕ್ಕಳ ತಿರುವಿನಲ್ಲಿ ಕಾರು ಮತ್ತು ಕೆಎಸ್ಆರ್ಟಿಸಿ ಬಸ್ನ ನಡುವೆ ನಡೆದ ಅಪಘಾತದ ಘಟನೆಯ ನೆನಪು ಮಾಸುವ ಮುನ್ನವೇ ಇಂದು ಮತ್ತೊಂದು ಭೀಕರ ರಸ್ತೆ ಅಪಘಾತ ಈ ತಿರುವಿನಲ್ಲಿ ನಡೆದಿದೆ.
ಇದೇ ಸ್ಥಳದಲ್ಲಿ ಇಂದು ಕಾರು ಮತ್ತು ಮೀನು ಸಾಗಾಟದ ಮಿನಿ ಟ್ರಕ್ನ ನಡುವೆ ನಡೆದ ಅಪಘಾತದಲ್ಲಿ ಎರಡು ವಾಹನದ ಚಾಲಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಚತುಷ್ಪಥ ಕಾಮಗಾರಿ ನಡೆಯುತ್ತಿರುವ ಈ ಪ್ರದೇಶಲ್ಲಿ ಸುಮಾರು 90%ಗೂ ಹೆಚ್ಚು ತಿರುವು ಇದ್ದು, ರಸ್ತೆಯಲ್ಲಿ ಅಳವಡಿಸುತ್ತಿರುವ ಸಿಸಿ ಕ್ಯಾಮೆರಾದ ಕೆಲಸದಿಂದಾಗಿ ಯಾವುದೇ ಸೂಚನಾ ಫಲಕವನ್ನು ಹಾಕದೆ ಏಕಮುಖವಾಹನ ಸಂಚಾರಕ್ಕೆ ಅವಕಾಶವನ್ನು ನೀಡಲಾಗಿದೆ. ತಿರುವಿನಲ್ಲಿ ಮುಂದಿನಿಂದ ಬರುವ ವಾಹನವು ಕಾಣದೇ ಇರುವುದು ಈ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ.

ಎರಡು ದಿನದಲ್ಲಿ ಹ್ಯಾಟ್ರಿಕ್ ಅಪಘಾತ
ನಿನ್ನೆ ಮಧ್ಯಾಹ್ನ (ಆಗಸ್ಟ್ ೦೫) ಈ ತಿರುವಿನಲ್ಲಿ ಕಾರು ಮತ್ತು ಮಿನಿ ಟ್ರಕ್ ನಡುವೆ ಅಪಘಾತ ಸಂಭವಿಸಿತ್ತು. ನಂತರ ಸಂಜೆಯ ವೇಳೆ ಕಾರು ಮತ್ತು ಸರ್ಕಾರಿ ಬಸ್ ನಡುವೆ ಅಪಘಾತ ಸಂಭವಿಸಿತ್ತು. ಹಾಗೆಯೇ ಇಂದು ಕಾರು ಮತ್ತು ಪಿಕಪ್ ವಾಹನದ ನಡುವೆ ಅಪಘಾತವಾಗಿದೆ.
ಕ್ಯಾರೇ ಎನ್ನದ ಹೆದ್ದಾರಿ ಪ್ರಾಧಿಕಾರ
ಅಪಾಯಕಾರಿಯಾಗಿರುವ ಪರಕ್ಕಳ ತಿರುವಿನಲ್ಲಿ ದಿನಕ್ಕೊಂದರಂತೆ ಅಪಘಾತ ಸಂಭವಿಸುತ್ತಿದ್ದರೂ, ರಸ್ತೆ ಕಾಮಗಾರಿಯ ಟೆಂಡರ್ ಪಡೆದಿರುವ ಮಹಾರಾಷ್ಟ್ರ ಮೂಲದ ಎಸ್ ಎನ್ ಅಠವಾಡೆ ಕಂಪೆನಿಯ ಬೇಜಾವಬ್ಧಾರಿ ನಡೆಯ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕ್ಯಾರೆ ಎನ್ನುತ್ತಿಲ್ಲ.
ಹಾಗೆಯೇ ಅಪಘಾತದ ಬಗ್ಗೆ ಕರ್ತವ್ಯ ನಿರ್ವಹಿಸುತ್ತಿರುವ ಎಸ್ ಎನ್ ಅಠವಾಡೆ ಕಂಪೆನಿಯ ಸಿಬ್ಬಂದಿಗಳ ಬಳಿ ಕೇಳಿದರೆ ಮೇಲಾಧಿಕಾರಿಗಳಿಗೆ ಹೆಸರು ಹೇಳಿ ತಮಗೂ ಈ ಅಪಘಾತಗಳಿಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.
ಗ್ರಾಮಸ್ಥರಿಂದ ಈಗಾಗಲೇ ಸಂಸದರು, ಹೆದ್ದಾರಿ ಪ್ರಾಧಿಕಾರಕ್ಕೆ ದೂರು
ರೆಖ್ಯ ಗ್ರಾಮದ ಪರಕ್ಕಳದಲ್ಲಿರುವ ಈ ಅಪಾಯಕಾರಿ ತಿರುವಿನ ಬಗ್ಗೆ ಈಗಾಗಲೇ ಗ್ರಾಮಸ್ಥರಿಂದ ಸಂಸದರು, ಜಿಲ್ಲಾಡಳಿತ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಭೇಟಿಯಾಗಿ, ಅವರಿಗೆ ಮನವರಿಕೆ ಮಾಡಲಾಗಿತ್ತು.


