
ಧರ್ಮಸ್ಥಳ: ನೇತ್ರಾವತಿ ಸ್ನಾನಘಟ್ಟದ ಹತ್ತಿರ ಜೂನ್ 25 ರಂದು ‘ಸ್ವಚ್ಛ ನೇತ್ರಾವತಿ’ ಬೃಹತ್ ಸ್ವಚ್ಛತಾ ಅಭಿಯಾನ ನಡೆಯಿತು.
ಗ್ರಾಮೀಣಾಭಿವೃದ್ಧಿ ಇಲಾಖೆ, ಸ್ಥಳೀಯ ಪಂಚಾಯತ್ಗಳು, ಸ್ವಚ್ಛ ಭಾರತ ಮಿಷನ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಸಹಯೋಗದೊಂದಿಗೆ ನಡೆದ ಈ ಜಾಗೃತಿ ಕಾರ್ಯಕ್ರಮದಲ್ಲಿ ರೋಟರಿ, ಲಯನ್ಸ್ ಕ್ಲಬ್, ಶೌರ್ಯ ಘಟಕ ಮತ್ತು ಸ್ಥಳೀಯ ಸ್ವಸಹಾಯ ಸಂಘಗಳು ಕೈಜೋಡಿಸಿದ್ದವು.
ಕಾರ್ಯಕ್ರಮದಲ್ಲಿ ಸ್ನಾನಘಟ್ಟದ ಪಾವಿತ್ರ್ಯತೆ ಸಾರುವ ಸ್ವಚ್ಛತಾ ಫಲಕವನ್ನು ಅನಾವರಣಗೊಳಿಸಿದ ಶ್ರೀ ಕ್ಷೇತ್ರದ ವೀರು ಶೆಟ್ಟಿಯವರು, ಸಂಘ-ಸಂಸ್ಥೆಗಳ ಒಗ್ಗೂಡುವಿಕೆಯಿಂದ ಸಾರ್ವಜನಿಕರಲ್ಲಿ ಉತ್ತಮ ಜಾಗೃತಿ ಮೂಡುತ್ತಿದೆ ಎಂದು ಶ್ಲಾಘಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಅವರು ಎಲ್ಲರನ್ನೂ ಸ್ವಾಗತಿಸಿ, ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಬರುವ ಈ ಪವಿತ್ರ ಕ್ಷೇತ್ರದ ಸ್ವಚ್ಛತೆಯನ್ನು ನಿರಂತರವಾಗಿ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಸಾರ್ವಜನಿಕರು ಇದಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.


