ಬೆಂಗಳೂರು: ರಾಜ್ಯದಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ಪಾವತಿಸುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ.

ಹಿಂದಿನ ವರ್ಷಗಳಲ್ಲಿ ಮನೆ ಹಾನಿ ಪರಿಹಾರ ಪಡೆದ ಸಂತ್ರಸ್ತರ ಮನೆಗಳು ಪುನಃ ಹಾನಿಯಾದ ಪ್ರಕರಣಗಳನ್ನು ಪರಿಗಣಿಸುವ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ಸ್ಪಷ್ಟೀಕರಣ ನೀಡಿದೆ.

ವಾಸದ ಮನೆ ಅಧಿಕೃತ ಮನೆಯಾದಲ್ಲಿ ನಿಯಮಾನುಸಾರ ಸರ್ಕಾರದಿಂದ ಪರಿಹಾರ ಸಿಗಲಿದೆ. ಜಮೀನಿನಲ್ಲಿ ಕಟ್ಟಿರುವ ಮನೆಗಳು, ಸರ್ಕಾರಿ ಜಮೀನು, ಗೋಮಾಳಗಳಲ್ಲಿ ಜನ ವಾಸವಾಗಿರುವ ಮನೆಗಳು ಅನಧಿಕೃತವಾದಲ್ಲಿ ನಿಯಮಾನುಸಾರ ಅಫಿದವಿತ್ ಪಡೆದು 1 ಲಕ್ಷ ರೂಪಾಯಿ ಪರಿಹಾರ ದೊರೆಯಲಿದೆ.
ಇನ್ನು ವಿವಿಧ ಸರ್ಕಾರಿ ವಸತಿ ಯೋಜನೆಯಡಿ ಮನೆಗಳು ಪೂರ್ಣಗೊಂಡು ಅದರಲ್ಲಿ ಜನ ವಾಸವಿದ್ದು ಮಳೆಗೆ ಹಾನಿಯಾದಲ್ಲಿ ಎ, ಬಿ ಮತ್ತು ಸಿ ಕೆಟಗರಿಯಲ್ಲಿ ಪರಿಹಾರ ಸಿಗಲಿದೆ.
ಈ ಮಧ್ಯೆ 2019, 2020, 2021 ನೇ ಸಾಲಿನಲ್ಲಿ ಎ ಅಥವಾ ಬಿ ಕೆಟಗರಿಯಲ್ಲಿ ಪರಿಹಾರ ಪಡೆದಿರುವ ಸಂತ್ರಸ್ತರ ಮನೆ 2022 ರಲ್ಲಿ ಪುನ: ಹಾನಿಯಾದರೆ ಪರಿಹಾರಕ್ಕೆ ಪರಿಗಣನೆಯಾಗುವುದಿಲ್ಲ.
2019, 2020 ನೇ ಸಾಲಿನಲ್ಲಿ ಹಾನಿಯಾಗಿ ಸಿ ಕೆಟಗರಿಯಲ್ಲಿ 50 ಸಾವಿರ ರೂಪಾಯಿ ಪರಿಹಾರ ಪಡೆದಿರುವ ಮನೆಗಳು 2022ನೇ ಸಾಲಿನಲ್ಲಿ ಹಾನಿಯಾದಲ್ಲಿ ಎ, ಬಿ ಮತ್ತು ಸಿ ಕೆಟಗರಿಯಲ್ಲಿ ಪರಿಹಾರ ಪಡೆಯಬಹುದಾಗಿದೆ.