Wednesday, June 3, 2026
Homeತಾಜಾ ಸುದ್ದಿಮಂಗಳೂರು: ಅಡಿಕೆ ಕಾಳುಮೆಣಸಿನ ಆಮದನ್ನು ತಡೆಯಲು ಕ್ರಮ ಕೈಗೊಳ್ಳಿ: ಕೇಂದ್ರಕ್ಕೆ ಪತ್ರದ ಮೂಲಕ ಮನವಿ ಮಾಡಿದ...

ಮಂಗಳೂರು: ಅಡಿಕೆ ಕಾಳುಮೆಣಸಿನ ಆಮದನ್ನು ತಡೆಯಲು ಕ್ರಮ ಕೈಗೊಳ್ಳಿ: ಕೇಂದ್ರಕ್ಕೆ ಪತ್ರದ ಮೂಲಕ ಮನವಿ ಮಾಡಿದ ಕ್ಯಾಂಪ್ಕೋ

- Advertisement -
- Advertisement -

ಮಂಗಳೂರು: ಮ್ಯಾನ್ಮಾರ್ ಗಡಿಯಲ್ಲಿನ ಐಸಿಪಿ, ಮೊರೇಹ್ ದಲ್ಲಿನ ಗೇಟ್ 1ಮತ್ತು 2ನ್ನು ತೆರೆದು ವ್ಯಾಪಾರ ಪುನರಾರಂಭಕ್ಕೆ ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹವಾದರೂ ಇತರ ವಸ್ತುಗಳ ಜೊತೆ ಸಾಂಬಾರ ವಸ್ತುಗಳ ಹೆಸರಿನಲ್ಲಿ ಅಡಿಕೆ, ಕಾಳುಮೆಣಸು ಕೂಡ ಕಡಿಮೆ ಬೆಲೆಗೆ ಆಮದಾಗುತ್ತಿವೆ. ಇದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಡಿ ಅವರು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.

ಭಾರತ ಅಡಿಕೆ ಮತ್ತು ಕಾಳುಮೆಣಸು ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿದೆ. ಈ ವಸ್ತುಗಳು ಒಳ ಬರಲಾರಂಭಿಸಿದರೆ ನಮ್ಮ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿ ಬೆಳೆಗಾರರ ಹಿತಕ್ಕೆ ಹಾನಿಯಾಗಲಿದೆ. ಆದ್ದರಿಂದ ತಾವು ಈ ಬಗ್ಗೆ ತಕ್ಷಣ ಗಮನ ಹರಿಸಿ ಮ್ಯಾನ್ಮಾರ್ ಗಡಿಯಲ್ಲಿನ ಮಣಿಪುರ ಗೇಟುಗಳ ಮೂಲಕ ಅಡಿಕೆ ಮತ್ತು ಕಾಳುಮೆಣಸು ಒಳನುಸುಳಿ ದೇಶೀಯ ಮಾರುಕಟ್ಟೆ ಪ್ರವೇಶಿಸದಂತೆ ನಿರ್ಬಂಧಿಸಿ ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಬೇಕು ಎಂದು ಕೊಡ್ಡಿ ಅವರು ಮನವಿ ಮಾಡಿದ್ದಾರೆ.

ಈಶಾನ್ಯ ರಾಜ್ಯಗಳ ಬೇಡಿಕೆ ರಾಷ್ಟ್ರೀಯ ಹಿತಾಸಕ್ತಿ ಮತ್ತು ಈಶಾನ್ಯ ರಾಜ್ಯಗಳ ಬೇಡಿಕೆಯಂತೆ ನೆರೆಯ ದೇಶಗಳ ಜತೆ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವಿದೇಶಾಂಗ ವ್ಯವಹಾರಗಳ ಇಲಾಖೆ ಮೇ 20ರಂದು ಹೊರಡಿಸಿರುವ ಅಧಿಸೂಚನೆಯಡಿ ಮಣಿಪುರದ ಮೊರೇನ್‌ನ ಐಸಿಪಿಯಲ್ಲಿನ ಗೇಟ್ ನಂ.1 ಮತ್ತು 2ನ್ನು ತೆರೆಯಲು ಸೂಚಿಸಿದೆ.

2020ರಿಂದ ಈ ಗೇಟುಗಳನ್ನು ಬಂದ್ ಮಾಡಲಾಗಿತ್ತು. ಈ ಕ್ರಮದಿಂದ ಒಟ್ಟಾರೆ ವ್ಯಾಪಾರ ವಹಿವಾಟಿಗೆ ಉತ್ತೇಜನ ಲಭಿಸಿದ್ದರೂ ಅಡಿಕೆ ಮತ್ತು ಕಾಳು ಮೆಣಸು ಕೂಡ ಈ ಮಾರ್ಗದಲ್ಲಿ ಒಳನುಸುಳಲು ಆರಂಭವಾಗಿರುವುದು ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಕ್ಯಾಂಪ್ಪೋ ವಿದೇಶಾಂಗ ಸಚಿವರ ಗಮನ ಸೆಳೆದಿದೆ. ಅಡಿಕೆ ಈ ಹಿಂದೆ ಸಿಲ್ದಾರ್, ಅಸ್ಸಾಂ, ಫಾಲಕಾಂತ, ಪಶ್ಚಿಮಬಂಗಾಳ ಮೂಲಕ ಬರ್ಮಾದಿಂದ ರಾಜಾರೋಷವಾಗಿ ಕಳ್ಳಮಾರ್ಗದಲ್ಲಿ ಗಡಿಯೊಳಗೆ ನುಸುಳುತ್ತಿತ್ತು. ಬೆಳೆಗಾರರಿಗೆ ಇದರಿಂದ ತೀವ್ರ ಸಂಕಷ್ಟ ಎದುರಾಗಿತ್ತು. ಇದನ್ನು ಮನಗಂಡ ಕೇಂದ್ರ ಸರಕಾರ ಶೇ. 108ರಷ್ಟು ಆಮದು ಸುಂಕ ಹೇರುವ ಮೂಲಕ ಕಿಲೋವೊಂದರ ಮೇಲೆ 251 ರೂ. ವಿಧಿಸಿತ್ತು. ಇದರಿಂದಾಗಿ ಅಡಿಕೆ ಮಾರುಕಟ್ಟೆ ಸ್ಥಿರತೆ ಕಾಣುವಂತಾಗಿತ್ತು ಎಂಬ ಅಂಶವನ್ನೂ ಕ್ಯಾಂಪ್ಪೋ ಮನವಿಯಲ್ಲಿ ವಿದೇಶಾಂಗ ಸಚಿವರ ಗಮನಕ್ಕೆ ತಂದಿದೆ.

- Advertisement -

Latest News

error: Content is protected !!