ಬೆಂಗಳೂರು: ಕೊರೋನಾ ಮಹಾಮಾರಿ ಪೊಲೀಸ್ ಇಲಾಖೆಯನ್ನು ಬೆಂಬಿಡದೆ ಕಾಡುತ್ತಿದ್ದು, ದಿನೇ ದಿನೇ ಸಿಬ್ಬಂದಿಯಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಹಫ್ತಾ ವಸೂಲಿ,ಸುಪಾರಿ ಕೊಲೆ ಸುಲಿಗೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಕರ್ನಾಟಕ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಭೂಗತ ದೊರೆ ರವಿ ಪೂಜಾರಿಯನ್ನು ತನಿಖೆ ನಡೆಸಿದ್ದ 14 ಸಿಸಿಬಿ ಅಧಿಕಾರಿಗಳಿಗೆ ಸೋಂಕು ತಗುಲಿದೆ.
ಬೆಂಗಳೂರಿನ ಮಡಿವಾಳ ಬಳಿಯಿರುವ FSL ಕಚೇರಿಯಲ್ಲಿ ರವಿ ಪೂಜಾರಿಯನ್ನ ಕೊರೊನಾ ಸೋಂಕಿನ ಮುಂಜಾಗೃತ ಕ್ರಮಕೈಗೊಂಡು ವಿಚಾರಣೆ ನಡೆಸಲಾಗಿದೆ. ಇದೀಗ ಆತನನ್ನ ತನಿಖೆ ಮಾಡಿದ್ದ ಎಸಿಪಿ, ಇನ್ಸ್ಸ್ಪೆಕ್ಟರ್, ಟೈಪಿಸ್ಟ್ಗೂ ಕೊರೊನಾ ಸೋಂಕು ತಗುಲಿದ್ದು, ಸದ್ಯ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಜೈಲಿನಲ್ಲಿ ಹಲವಾರು ಕೈದಿಗಳ ಜೊತೆ ಇದ್ದ ಕಾರಣ ಅವನಿಗೂ ಸೋಂಕು ತಗುಲಿರಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಸಿಬಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬರ್ತಿದ್ದ ಹಾಗೆ ತನಿಖೆಯನ್ನ ಸದ್ಯಕ್ಕೆ ನಿಲ್ಲಿಸಲಾಗಿದೆ. ಹೀಗಾಗಿ ರವಿ ಪೂಜಾರಿಯ ತನಿಖೆ ಇನ್ನಷ್ಟು ಬಾಕಿ ಉಳಿದಿವೆ ಎಂದು ಅಧಿಕಾರಿಗಳು ಮತ್ತೆ ಆತನನ್ನ ಕಸ್ಟಡಿಗೆ ತೆಗೆದುಕೊಂಡು ತನಿಖೆ ನಡೆಸಲು ಮುಂದಾಗಿದ್ದರು. ಆದರೆ ಸಿಬ್ಬಂದಿಗೆ ಕೊರೊನಾ ಇರುವ ಕಾರಣ ತನಿಖೆಗೆ ಬ್ರೇಕ್ ಹಾಕಿದ್ದು, ತನಿಖೆ ನಡೆಸಿದ್ದ ಹಿರಿಯ ಅಧಿಕಾರಿಗಳು ಕ್ವಾರಂಟೀನ್ಗೆ ಒಳಪಟ್ಟಿದ್ದಾರೆ.
ಇತ್ತೀಚೆಗೆ ರವಿ ಪೂಜಾರಿಯನ್ನ ಮಂಗಳೂರಿನ ವಕೀಲ ನೌಶದ್ ಕಾಶಿಂಜಿ ಕೊಲೆ ಕೆಸ್ ಹಾಗೂ ಖಾಸಗಿ ಚಾನೆಲ್ ಮಾಲೀಕನ ಹಲ್ಲೆ ನಡೆಸಿದ ಪ್ರಕರಣದ ಸಲುವಾಗಿ ಆತನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಕರೆತಂದು ವಿಚಾರಣೆ ನಡೆಸಲಾಗಿತ್ತು.