ಉಡುಪಿ: ಕಳೆದ ಏಳು ವರ್ಷಗಳಿಂದ ಕೃಷ್ಣಾಷ್ಟಮಿಗೆ ಭಿನ್ನ ವೇಷ ಧರಿಸಿ ಅದರಿಂದ ಸಂಗ್ರಹವಾದ ಹಣವನ್ನು ಬಡಮಕ್ಕಳ ಚಿಕಿತ್ಸೆಗೆ ವಿನಿಯೋಗಿಸುವ ಮೂಲಕ ದೇಶ-ವಿದೇಶಗಳಲ್ಲಿ ಹೆಸರು ಗಳಿಸಿರುವ ರವಿ ಕಟಪಾಡಿ ಈ ಬಾರಿ ಕೊನೆಯ ಬಾರಿಗೆ ವೇಷ ಹಾಕಿ ತನ್ನ ಗುರಿ ತಲುಪಿದ್ದಾರೆ.
ಏಳು ವರ್ಷಗಳಲ್ಲಿ ₹90 ಲಕ್ಷ ಸಂಗ್ರಹಿಸಿ ಜಿಲ್ಲೆಯ ವಿವಿಧ ಭಾಗದ ಒಟ್ಟು 66 ಮಕ್ಕಳ ಚಿಕಿತ್ಸೆಗೆ ನೆರವಾಗಿದ್ದಾರೆ. ಈ ವರ್ಷ ಅಷ್ಟಮಿಯಂದು ಡೀಮನ್ ರಾಕ್ಷಸ ವೇಷ ಹಾಕಿ ₹10ಲಕ್ಷ ಸಂಗ್ರಹಿಸಿದ್ದಾರೆ. ಇಲ್ಲಿಯವರೆಗೆ ಅವರಯ ಒಟ್ಟು ₹1 ಕೋಟಿ ದೇಣಿಗೆ ಸಂಗ್ರಹಿಸಿ ತನ್ನ ಗುರಿಯನ್ನು ಸಾಧಿಸಿದ್ದಾರೆ.
‘ಈ ವರ್ಷ ಸಂಗ್ರಹವಾದ ಹಣವನ್ನು 8 ಮಕ್ಕಳಿಗೆ ಆಗಸ್ಟ್ 30ರಂದು ಜಿಲ್ಲಾಧಿಕಾರಿಗಳ ಮುಖಾಂತರ ವಿತರಿಸಲಾಗುವುದು’ ಎಂದು ರವಿ ಕಟಪಾಡಿ ಮಾಹಿತಿ ನೀಡಿದ್ದಾರೆ.
‘7 ವರ್ಷಗಳ ಸುದೀರ್ಘ ಅವಧಿಯಲ್ಲಿ ನಾನು ತಂಡದ ಸದಸ್ಯರ ಸತತ ಪರಿಶ್ರಮ ಹಾಗೂ ದಾನಿಗಳ ಬೆಂಬಲದಿಂದ ಕೋಟಿ ಸಂಗ್ರಹಿಸಿ ನೆರವು ನೀಡುವ ಮಹತ್ಕಾರ್ಯ ಮಾಡಲು ಸಾಧ್ಯವಾಗಿದೆ. ಅನೇಕ ಕಲಾವಿದರು ಏಳು ವಿಭಿನ್ನ ವೇಷ ಹಾಕಲು ಸಹಕರಿಸಿದ್ದಾರೆ. ಇದು ನನ್ನ ಕೊನೆಯ ವೇಷ. ದೇವರಿಗೆ ಪ್ರಿಯವಾದ ಕೆಲಸ ಮಾಡಿದ್ದೇನೆ ಎಂಬ ಸಂತೃಪ್ತಿ ನನಗಿದೆ’ ಎಂದು ರವಿ ಕಟಪಾಡಿ ತಿಳಿಸಿದ್ದಾರೆ.