ಬೆಳಗಾವಿ: ಅಡಕೆ ಬೆಳೆಗಾರರನ್ನು ಬಾಧಿಸುತ್ತಿರುವ ಎಲೆ ಚುಕ್ಕೆ ರೋಗ ನಿಯಂತ್ರಣದ ಪರಿಶೀಲನೆಗಾಗಿ ಕೇಂದ್ರ ಸರ್ಕಾರದ ವಿಜ್ಞಾನಿಗಳ ತಂಡವು ಈಗಾಗಲೇ ರಾಜ್ಯಕ್ಕೆ ಭೇಟಿ ನೀಡಿದ್ದು, ತ್ವರಿತವಾಗಿ ಔಷಧಿ ಕಂಡು ಹಿಡಿಯುವ ಪ್ರಯತ್ನ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಎಲೆ ಚುಕ್ಕೆ ರೋಗಕ್ಕೆ ಅಡಿಕೆ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ತುತ್ತಾಗುತ್ತಿದ್ದು, ಇತ್ತೀಚಿಗೆ ಈ ರೋಗ ಗಾಳಿ ಮೂಲಕ ಹೆಚ್ಚಾಗಿ ಹರಡುತ್ತಿದೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿಗಳು ಇತ್ತೀಚೆಗೆ ಕೆಲ ಅಡಕೆ ತೋಟಗಳಿಗೆ ಭೇಟಿ ನೀಡಿದ್ದು, ರೋಗ ನಿಯಂತ್ರಣದೊಂದಿಗೆ ಬೆಳೆಗಾರರ ನೆರವಿಗೆ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ. ವಿಜ್ಞಾನಿಗಳು ಈ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈಗಾಗಲೇ ರೋಗಕ್ಕೆ ತುತ್ತಾಗಿರುವ ತೋಟಗಳಿಗೆ ಒಂದು ಸುತ್ತಿನ ಔಷಧಿ ಸಿಂಪಡಿಸಲಾಗಿದ್ದು, ಬೆಳೆ ನಷ್ಟ ಆಗಿರುವವರಿಗೆ ಪರಿಹಾರ ನೀಡಲು ಯೋಜಿಸಲಾಗುತ್ತಿದೆ ಎಂದು ತಿಳಿಸಿರುವ ಗೃಹ ಸಚಿವರು, ಈ ರೋಗದ ಔಷಧಿ ಕಂಡು ಹಿಡಿಯುವ ಸಲುವಾಗಿಯೇ ತೋಟಗಾರಿಕೆ ವಿವಿಗಳಿಗೆ 4 ಕೋಟಿಯಷ್ಟು ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಅಲ್ಲದೇ ತೋಟಗಾರಿಕಾ ಸಚಿವರ ಸಭೆಯಲ್ಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ, ವಿಸ್ತಾರವಾಗುತ್ತಿರುವ ಅಡಕೆ ಬೆಳೆ ಪ್ರದೇಶವನ್ನು ಗಮನಿಸಿದರೆ ಎಂದಾದರೊಂದು ದಿನ ಬೆಲೆ ಕುಸಿದು ಬೀಳುವ ಆತಂಕವಿದೆ ಎಂದೂ ಆರಗ ಜ್ಞಾನೇಂದ್ರ ಸದನದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.