ಮೈಸೂರು(ಜೂ.22): ಬಿಜೆಪಿ, ಮೋದಿ ಎಂದರೆ ಕಿಡಿ ಕಾರುತ್ತಿದ್ದ ಕಾಂಗ್ರೆಸ್ ಮಾಜಿ ಸಂಸದೆ, ಸ್ಯಾಂಡಲ್ವುಡ್ ಸ್ಟಾರ್ ನಟಿ ರಮ್ಯಾ ಇದೀಗ ತಮ್ಮ ಟ್ವೀಟ್ ಮೂಲಕ ಎಲ್ಲರುಗೂ ಅಚ್ಚರಿ ಕೊಟ್ಟಿದ್ದಾರೆ. ಈಗಾಗಲೇ ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡಿ ಹಿಂತಿರುಗಿರುವ ಪ್ರಧಾನಿ ಮೋದಿಗೆ ಮತ್ತೆ ಬರುವಂತೆ ಆಮಂತ್ರಣ ನೀಡಿರುವ ರಮ್ಯಾ, ಈ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರನ್ನು ಗೊಂದಲಕ್ಕೀಡು ಮಾಡಿದ್ದಾರೆ. ಅವರ ಟ್ವೀಟ್ ಹಿಂದಿನ ರಹಸ್ಯವೇನು ಎಂದು ಅರಿತುಕೊಳ್ಳುವಲ್ಲಿ ಅಭಿಮಾನಿಗಳು ತಲ್ಲೀನರಾಗಿದ್ದಾರೆ.
ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದ ಹಿನ್ನೆಲೆಯಲ್ಲಿ ರಮ್ಯಾ ಈ ಟ್ವೀಟ್ ಮಾಡಿದ್ದಾರೆ. ಅಷ್ಟಕ್ಕೂ ಟ್ವೀಟ್ನಲ್ಲಿ ರಮ್ಯಾ ಏನು ಹೇಳಿದ್ದಾರೆ ಎಂದು ನೋಡುವುದಾದರೆ, ‘ನಮ್ಮ ಮೈಸೂರಿಗೆ’ ಸ್ವಾಗತ ಪ್ರಧಾನಿ ನರೇಂದ್ರ ಮೋದಿಯವರೇ.. ಎಂದು ಸ್ವಾಗತಿಸಿದ್ದಾರೆ. ಮುಂದುವರೆಸಿ ಬರೆದಿರುವ ರಮ್ಯಾ, ಸಮಯವಿದ್ದರೆ ಮೈಸೂರಿನಲ್ಲಿ ಮಾಡಬೇಕಾದ ಕೆಲಸಗಳ ಪಟ್ಟಿ ಎಂದು ನಮೂದಿಸಿರುವ ರಮ್ಯಾ ಇಲ್ಲಿನ ರಸ್ತೆಗಳನ್ನು ಉದ್ಘಾಟಿಸಿ, ಇದರ ಅಗತ್ಯ ನಮಗೆ ಬಹಳಷ್ಟಿದೆ. ಇದನ್ನು ಕಲ್ಪಿಸಿದ ಸಚಿವ ನಿತಿನ್ ಗಡ್ಕರಿಗೆ ಧನ್ಯವಾದ ಎಂದೂ ಹೇಳಿದ್ದಾರೆ.
ಇದೇ ವೇಳೆ ಮೈಸೂರಿನ ಜನಪ್ರಿಯ ಮೈಲಾರಿ ಬೆಣ್ಣೆ ದೋಸೆ ರುಚಿಯನ್ನೂ ಸವಿಯಿರಿ, ಇದು ಬಹಳ ಮೃದುವಾದ ದೋಸೆ ಕೂಡಾ ಹೌದು ಎಂದು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರುವ ರಮ್ಯಾ ನೀವು ಮೈಸೂರಿನ ಆರ್ಕೆಸ್ಟ್ರಾ ಸಂಸ್ಕೃತಿಯನ್ನು ವೀಕ್ಷಿಸಬಹುದು, ಸಾಧ್ಯವಾಗದಿದ್ದರೆ ಮೈಸೂರಿನ ಯುವ ಪ್ರತಿಭಾವಂತ ಮೈಸೂರಿಯನ್ನರು ಮಾಡಿದ ಆರ್ಕೆಸ್ಟ್ರಾದ ಟ್ರೈಲರ್ ವೀಕ್ಷಿಸಬಹುದು ಎಂದು, ಈ ಸಿನಿಮಾವನ್ನೂ ಪ್ರಮೋಟ್ ಮಾಡಿದ್ದಾರೆ.
ತಮ್ಮ ಪಟ್ಟಿಯನ್ನು ಪೂರ್ಣಗೊಳಿಸಿದ ರಮ್ಯಾ, ಈ ಪಟ್ಟಿಗೆ ನೀವೇನಾದರೂ ಸೇರಿಸಲು ಇಚ್ಛಿಸಿದರೆ ಕಮೆಂಟ್ ಮಾಡಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿಗೆ ಮತ್ತೆ ಮೈಸೂರಿಗೆ ಭೇಟಿ ನೀಡುವಂತೆಯೂ ಆಹ್ವಾನ ನೀಡಿದ್ದಾರೆ ಸ್ಯಾಂಡಲ್ವುಡ್ ಕ್ವೀನ್. ಅವರ ಈ ಟ್ವೀಟ್ಗಳ ಬಳಿಕ ಅನೇಕ ರೀತಿಯ ವದಂತಿಗಳು ಹಬ್ಬಿವೆ. ಹೀಗಿದ್ದರೂ ಅನೇಕ ಮಂದಿ ಇದು ಸಿನಿಮಾ ಪ್ರಚಾರಕ್ಕಾಗಿ ಮಾಡಿದ ಗಿಮಿಕ್ ಎಂದಿದ್ದಾರೆ. ಹೀಗಿದ್ದರೂ ಮೋದಿ ವಿರುದ್ಧ ಮಾತು ಮಾತಿಗೂ ಕಿಡಿ ಕಾರುತ್ತಿದ್ದ ನಟಿ ರಮ್ಯಾ ಕೇವಲ ಪ್ರಚಾರಕ್ಕಾಗಿ ಇಂತಹ ಟ್ವೀಟ್ ಮಾಡಿರಲಿಕ್ಕಿಲ್ಲ, ಏನಾದರೂ ರಾಜಕೀಯ ಉದ್ದೇಶವಿರಬಹುದೆಂಬ ವಾದವೂ ಕೇಳಿ ಬಂದಿದೆ. ಇನ್ನು ಕೆಲ ದಿನಗಳ ಹಿಂದಷ್ಟೇ ಅವರು ಕೆಪಿಸಿಸಿ ಅಧ್ಯಕ್ಷ ಡಿ, ಕೆ. ಶಿವಕುಮಾರ್ ವಿರುದ್ಧ ಕಿಡಿ ಕಾರಿರುವ ವಿಚಾರ ಜನರ ಮನಸ್ಸಿನಿಂದ ದೂರವಾಗಿಲ್ಲ.