ಬೆಂಗಳೂರು :ಪುನೀತ್ ರಾಜ್ಕುಮಾರ್ ಎಷ್ಟು ಫಿಟ್ನೆಸ್ ಫ್ರೀಕ್ ಅನ್ನೋದು ಪದೇ ಪದೇ ಹೇಳಬೇಕಿಲ್ಲ. ಲಾಕ್ಡೌನ್ನಲ್ಲಿ ಅವರು ಹಂಚಿಕೊಂಡ ವಿಡಿಯೋಗಳೇ ಅದಕ್ಕೆ ಸಾಕ್ಷಿ. ಮನೆಯಲ್ಲಿ ಖಾಲಿ ಇದ್ದರೆ ಸಾಕು ವರ್ಕೌಟ್ ಮಾಡೋಕೆ ಆರಂಭಿಸುತ್ತಾರೆ. ಅವರ ಅಭಿನಯದ ಯುವರತ್ನ ಸಿನಿಮಾದಲ್ಲಿ ಕಾಲೇಜು ವಿದ್ಯಾರ್ಥಿ ಪಾತ್ರದಲ್ಲಿ ನಟಿಸುತ್ತಿದ್ದು, ಅದಕ್ಕಾಗಿಯೂ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದಾರಂತೆ ಅಪ್ಪು.
ಪುನೀತ್ ಅವರು ವರ್ಕೌಟ್ ಜೊತೆಗೆ ಸೈಕ್ಲಿಂಗ್ ಸಹ ಮಾಡುತ್ತಾರೆ. ಆಗಾಗ ಸೈಕಲ್ ಹತ್ತಿ ನಂದಿಬೆಟ್ಟಕ್ಕೂ ಹೋಗುತ್ತಾರೆ ಅಪ್ಪು. ಯೂಟ್ಯೂಬ್ನಲ್ಲಿರುವ ಪಿಆರ್ಕೆ ಆಡಿಯೋ ಚಾನೆಲ್ನಲ್ಲಿ ತಮ್ಮ ಸೈಕ್ಲಿಂಗ್ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಅಭಿಮಾನಿಗಳಿಗೆ ಸಖತ್ ಇಷ್ಟವಾಗುತ್ತಿದೆ.
ಪುನೀತ್ ಬೆಳಗೆದ್ದು ಸೈಕಲ್ ಹತ್ತಿ ಸದಾಶಿವನಗರದಲ್ಲಿರುವ ತಮ್ಮ ನಿವಾಸದಿಂದ ಹೊರಟು ವಿಧಾನಸೌಧದ ಸುತ್ತಮುತ್ತ ಸುತ್ತಾಡುತ್ತಾರೆ. ಸೈಕಲ್ನಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಓಡಾಡಿರುವ ವಿಡಿಯೋವನ್ನು ಹಂಚಿಕೊಂಡಿರುವ ಪುನೀತ್ ಪೆಡಲ್ ಟುವರ್ಡ್ಸ್ ಫಿಟ್ ಮಾರ್ನಿಂಗ್- ನಮ್ಮ ಬೆಂಗಳೂರು ಎಂದು ಬರೆದುಕೊಂಡಿದ್ದಾರೆ.
ನಿತ್ಯ ಆರೋಗ್ಯಕ್ಕಾಗಿ ಪೆಡಲ್ ಮಾಡಿ ಅಂದರೆ ಸೈಕಲ್ ತುಳಿಯಿರಿ ಎಂಬ ಸಂದೇಶದೊಂದಿಗೆ ಈ ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ ಖಾಲಿ ಇರುವ ರಸ್ತೆಗಳನ್ನು ನೋಡಿದರೆ, ಈ ವಿಡಿಯೋವನ್ನು ನೋಡಿದ ಅಭಿಮಾನಿಗಳು ನಮ್ಮ ಏರಿಯಾಗೆ ಬಂದಿದ್ದಾರೆ ಎಂದು ಖುಷಿಯಿಂದ ಕಮೆಂಟ್ ಮಾಡುತ್ತಿದ್ದಾರೆ.
ಪುನೀತ್ ರಾಜ್ ಕುಮಾರ್ ಸಂತೋಷ್ ಆನಂದ್ ರಾಮ್ ಅವರ ಕಾಂಬಿನೇಷನ್ನಲ್ಲಿ ಬರುತ್ತಿರುವ ಸಿನಿಮಾ ಯುವರತ್ನ. ಲಾಕ್ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಈ ಸಿನಿಮಾದ ಡಬ್ಬಿಂಗ್ ಕೆಲಸ ಆರಂಭವಾಗಿತ್ತು. ಈ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ಈ ಪೋಸ್ಟ್ನಿಂದಾಗಿ ಅಪ್ಪು ಅಭಿಮಾನಿಗಳಿಗೆ ಖುಷಿಯಾಗಿದ್ದರು. ಆದರೆ ಈಗ ಈ ಚಿತ್ರದ ಹಾಡನ್ನು ರಿಲೀಸ್ ಮಾಡುವಂತೆ ಬಹಳ ಸಮಯದಿಂದ ಒತ್ತಡ ಹೇರುತ್ತಿದ್ದಾರೆ. ಅಪ್ಪು ಹಂಚಿಕೊಂಡಿರುವ ಸೈಕಲ್ ವಿಡಿಯೋದ ಕಮೆಂಟ್ ಬಾಕ್ಸ್ನಲ್ಲೂ ಇದೇ ಬೇಡಿಕೆಯನ್ನು ಇಡುತ್ತಿದ್ದಾರೆ ಫ್ಯಾನ್ಸ್.