ಮಂಗಳೂರು : ನಗರದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂದೂರ್ ವೆಲ್ ನ ಅಪಾರ್ಟ್ಮೆಂಟ್ ವೊಂದರ ಫ್ಲಾಟ್’ನಲ್ಲಿ ಗ್ರಾಹಕರಿಗೆ ವೇಶ್ಯಾವಾಟಿಕೆ ದಂಧೆಗೆ ಯುವತಿಯರನ್ನು ಹಾಗೂ ಮಹಿಳೆಯರನ್ನು ಒದಗಿಸುತ್ತಿದ್ದ ಸ್ಥಳಕ್ಕೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ ಘಟನೆ ಇಂದು ನಡೆದಿದೆ.
ಬಂಧಿತ ಆರೋಪಿಗಳನ್ನು ವಿಟ್ಲ ಪಡ್ನೂರು ಪರ್ತಿಪಾಡಿಯ ಕೆ.ಪಿ. ಹಮೀದ್(54), ಆಕಾಶ ಭವನ ಬಳಿಯ ಅನುಪಮ (46) ಹಾಗೂ ವಾಸುಕಿ ನಗರ, ನಾಗಬ್ರಹ್ಮ ಎಕ್ಕೂರಿನ ನಿಶ್ಮಿತ(23) ಎಂದು ಗುರುತಿಸಲಾಗಿದೆ.
ಮಂಗಳೂರು ನಗರದ ಪೂರ್ವ(ಕದ್ರಿ) ಪೊಲೀಸ್ ಠಾಣಾ ವ್ಯಾಪ್ತಿಯ ಬೆಂದೂರ್ ವೆಲ್ 3 ನೇ ಕ್ರಾಸ್ ರಸ್ತೆಯಲ್ಲಿರುವ PEEBI ರೆಸಿಡೆನ್ಸಿ ಎಂಬ ಆಪಾರ್ಟ್ ಮೆಂಟ್ ನ 2 ನೇ ಮಹಡಿಯ ಫ್ಲಾಟ್ ವೊಂದರಲ್ಲಿ, ವೇಶ್ಯಾವಾಟಿಕೆ ನಡೆಸುತ್ತಿದ್ದರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ರವರ ನೇತ್ರತ್ವದ ತಂಡ ದಾಳಿ ನಡೆಸಿ ಅಕ್ರಮವಾಗಿ ಲಾಭ ಗಳಿಸುವ ಉದ್ದೇಶದಿಂದ ಹುಡುಗಿಯರನ್ನು ತರಿಸಿಕೊಂಡು ಅನೈತಿಕ ಚಟುವಟಿಕೆ ದಂಧೆಯನ್ನು ನಡೆಸುತ್ತಿದ್ದರು.
ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಅವರಿಂದ 5 ಮೊಬೈಲ್ ಫೋನುಗಳು ಹಾಗೂ 50,000/- ನಗದು, ಮಾರುತಿ 800 ಕಾರನ್ನು ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ. ಅಲ್ಲದೇ 4 ಮಂದಿ ನೊಂದ ಯುವತಿ/ ಮಹಿಳೆಯರನ್ನು ರಕ್ಷಿಸಲಾಗಿದೆ. ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪಕರಣ ದಾಖಲಾಗಿದೆ.
ಪೊಲೀಸ್ ಕಮೀಷನರ್ ಶಶಿಕುಮಾರ್ ಎನ್, ಐ.ಪಿ.ಎಸ್ ಕಾನೂನು & ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್, ಐ ಪಿ ಎಸ್, ಅಪರಾಧ & ಸಂಚಾರ ವಿಭಾಗದ ಡಿಸಿಪಿ ಶ್ರೀ ದಿನೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್ಐ ರಾಜೇಂದ್ರ ಬಿ, ಪ್ರದೀಪ್ ಟಿ ಆರ್ ರವರು ಹಾಗೂ ಸಿಸಿಬಿ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.