Monday, May 6, 2024
Homeತಾಜಾ ಸುದ್ದಿಮುಂಬೈಯ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ವತಿಯಿಂದ ಕರಾವಳಿ ಕರ್ನಾಟಕದ ಮಾಲಿನ್ಯ ನಿಯಂತ್ರಿಸಿ ಕೈಗಾರೀಕರಣ -...

ಮುಂಬೈಯ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ವತಿಯಿಂದ ಕರಾವಳಿ ಕರ್ನಾಟಕದ ಮಾಲಿನ್ಯ ನಿಯಂತ್ರಿಸಿ ಕೈಗಾರೀಕರಣ – ವಿಚಾರ ವಿನಿಮಯ ಸಭೆ

spot_img
- Advertisement -
- Advertisement -

ಮುಂಬಯಿ : ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ಕರಾವಳಿ ಕರ್ನಾಟಕದ ಮಾಲಿನ್ಯ ನಿಯಂತ್ರಿಸಿ ಕೈಗಾರೀಕರಣ – ವಿಚಾರ ವಿನಿಮಯ ಸಭೆಯು ಜು. 8 ರಂದು ಸಂಜೆ ಕುರ್ಲಾದ ಬಂಟರ ಸಂಘ ಮುಂಬಯಿಯ ಬಂಟರ ಭವನದ ಎನೆಕ್ಸ್ ಹಾಲ್ ನಲ್ಲಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಅಧ್ಯಕ್ಷರಾದ ಎಲ್ ವಿ ಅಮೀನ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಮಂಗಳೂರಿನ ಬಲ್ಕುಂಜೆ, ಕೊಲ್ಲೂರು ಹಾಗೂ ಉಳೆಪಾಡಿ ಗ್ರಾಮದ 1091 ಎಕ್ರೆ ಜಮೀನನ್ನು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿರುವ ಪ್ರಕ್ರಿಯೆಯ ಬಗ್ಗೆ ಮುಂಬಯಿ ಮಹಾನಗರ ಹಾಗೂ ಉಪನಗರಗಳ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ವಿಚಾರ ವಿನಿಮಯ ನಡೆಯಿತು.

ಕರ್ನಾಟಕ ಸರಕಾರದ ನೂತನವಾಗಿ ರಾಸಾಯನಿಕ ಗೊಬ್ಬರ ಕಾರ್ಖಾನೆಗಳನ್ನು ಸ್ಥಾಪಿಸುವ ಬಗ್ಗೆ ಸಂಘ-ಸಂಸ್ಥೆಗಳ ಅಭಿಪ್ರಾಯ ಸಂಗ್ರಹಿಸುವ ಬಗ್ಗೆ ಚರ್ಚೆ ನಡೆಯಿತು. ಈ ಬಗ್ಗೆ ಸ್ಥಳೀಯ ಸಾರ್ವಜನಿಕರ ಭೂಮಿ ತೆರವುಗೊಳ್ಳುವ ಸಂತ್ರಸ್ತರು ಹಾಗೂ ಸ್ಥಳೀಯ ರಾಜಕಾರಣಿಗಳಿಗೆ ಸಂವಾದ ನಡೆಸಯಿತು. ಪರಿಸರ ಸಂರಕ್ಷಣೆ ಭೂಮಿ ತೆರವು ಮಾಡಿಸುವಲ್ಲಿ ಸಮಾನ ಮೌಲ್ಯಮಾಪನ ದೊಂದಿಗೆ ಪರಿಹಾರ ಸಂತ್ರಸ್ತರಿಗೆ ಉದ್ಯೋಗ ವ್ಯವಸ್ಥೆ ಕರ್ನಾಟಕ ಸರಕಾರ ಹಾಗೂ ನಿಯೋಜಿತ ಬಂಡವಾಳ ಹೂಡಿಕೆದಾರರು ಸಂಧಾನ ಮಾತುಕತೆ ನಡೆಸುವ ಬಗ್ಗೆ ಚರ್ಚಿಸಲಾಯಿತು.

ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲಿಯಾನ್ ಸ್ವಾಗತಿಸಿದರು. ಸಮಿತಿ ಉಪಾಧ್ಯಕ್ಷ ನಿತ್ಯಾನಂದ ಕೋಟ್ಯಾನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಭೆಯಲ್ಲಿ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ನ್ಯಾ. ಸುಭಾಷ್ ಬಿ. ಶೆಟ್ಟಿ, ಧರ್ಮಪಾಲ್ ದೇವಾಡಿಗ, ಹರೀಶ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರುಗಳಾದ ಧನಂಜಯ ಶೆಟ್ಟಿ, ಸಿಎ ಐ ಆರ್ ಶೆಟ್ಟಿ, ಜೊತೆ ಕೋಶಾಧಿಕಾರಿ ಸಂಜೀವ ಪೂಜಾರಿ, ಜೊತೆ ಕಾರ್ಯದರ್ಶಿ ಹ್ಯಾರೀ ಸಿಕ್ವೇರಾ, ಗೌರವ ಪ್ರಧಾನ ಕಾರ್ಯದರ್ಶಿ, ಆರ್ ಕೆ ಶೆಟ್ಟಿ, ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಕೆ. ಎಲ್. ಬಂಗೇರ, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಸ್ ನ ಕಾರ್ಯಧ್ಯಕ್ಷ ಎನ್. ಟಿ. ಪೂಜಾರಿ, ಬಂಟ್ಸ್ ಸಂಘ ಮುಂಬಯಿಯ ಡಾ. ಪ್ರಭಾಕರ ಶೆಟ್ಟಿ ಬೋಳ, ಸಾಫಲ್ಯ ಸೇವಾ ಸಂಘದ ಉಪಾಧ್ಯಕ್ಷ ಕೃಷ್ಣಕುಮಾರ್, ಬಂಗೇರ, ತೀಯಾ ಸಮಾಜದ ಮಾಜಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ, ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಜಿಟಿ ಆಚಾರ್ಯ, ಜವಾಬ್ ಅಧ್ಯಕ್ಷ ಹರೀಶ್ ಶೆಟ್ಟಿ, ಬಿಲ್ಲವರ ಅಸೋಸಿಯೇಷನ್ ಮುಂಬೈಯ ಉಪಾಧ್ಯಕ್ಷ ಸುರೇಶ್ ಕುಮಾರ್, ದೇವಾಡಿಗ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಹಿರಿಯಡ್ಕ ಮೋಹನ್ ದಾಸ್, ಕುಲಾಲ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ ಗಿರೀಶ್ ಸಾಲ್ಯಾನ್, ವಿದ್ಯಾದಾಯಿನಿ ಸಭಾ ಮುಂಬಯಿ ಅಧ್ಯಕ್ಷ ಪುರುಷೋತ್ತಮ್ ಕೋಟ್ಯಾನ್, ಗಾಣಿಗ ಸಂಘದ ಅಧ್ಯಕ್ಷ ರಾಮಚಂದ್ರ ಗಾಣಿಗ, ಪದ್ಮಶಾಲಿ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಲೀಲಾಧರ್ ಶೆಟ್ಟಿಗಾರ್, ಒಕ್ಕಲಿಗರ ಸಂಘದ ಅಧ್ಯಕ್ಷ ಜಿತೇಂದ್ರ ಗೌಡ, ಮಹಾರಾಷ್ಟ್ರ ಕನ್ನಡ ಕಲಾವಿದರ ಪರಿಷತ್ ಅಧ್ಯಕ್ಷ ಡಾ. ಸುರೇಂದ್ರ ಕುಮಾರ್ ಹೆಗ್ಡೆ, ಕನ್ನಡ ಸಂಘ ಸಂತಾಕ್ರೂಸ್ ನ ಉಪಾಧ್ಯಕ್ಷರುಗಳಾದ ಸದಾನಂದ ಸಫಲಿಗ, ಭುಜಂಗ ಶೆಟ್ಟಿ, ಕಲಾಜಗತ್ತು ಸಂಸ್ಥಾಪಕ ಡಾ. ವಿಜಯಕುಮಾರ್ ಶೆಟ್ಟಿ, ನಮೋ ಮೋಯರ್ ಗ್ಲೋಬಲ್ ಪೌಂಡೇಶನಿನ ಅಧ್ಯಕ್ಷ ರವಿ ಉಚ್ಚಿಲ್, ಕಲಾ ಸೌರಭದ ಅಧ್ಯಕ್ಷ ಪದ್ಮನಾಭ ಸಸಿಹಿತ್ಲು, ಭಂಡಾರಿ ಸೇವಾ ಸಂಘದಗ ಅಧ್ಯಕ್ಷ ರಾಕೇಶ್ ಭಂಡಾರಿ ಹಾಗೂ ಇತರರು ಉಪಸ್ಥಿತರಿದ್ದರು ಸಮಿತಿ ಕೈಗೊಂಡ ನಿರ್ಣಯಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದರು.

ಈ ಕುರಿತು ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ ಅಧ್ಯಕ್ಷ ಎಲ್ ವಿ ಅಮೀನ್ ಮಾತನಾಡಿ, ಇಲ್ಲಿರುವ ನಮ್ಮ ಜಿಲ್ಲೆಗಳ ಎಲ್ಲಾ ಸಮುದಾಯಗಳ ಪ್ರಮುಖರ ಸಹಕಾರದಿಂದ ಸಮಿತಿಯು ಜಿಲ್ಲೆಗಳ ಪ್ರಗತಿಗಾಗಿ ಹಲವಾರು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು ಇದರಲ್ಲಿ ಯಶಸ್ಸನ್ನು ಪಡೆದಿದೆ. ಈಗ ಸರಕಾರವು ಉಳಿಪಾಡಿ ಗ್ರಾಮದಲ್ಲಿ ಉದ್ಯಮಕ್ಕಾಗಿ ಜಾಗವನ್ನು ಸ್ವಾದೀನಪಡಿಸುತ್ತಿದ್ದು, ಪರಿಸರ ಮಾಲಿನ್ಯ ರಹಿತ ಉದ್ಯಮ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆಯುವಂತಹ ಉದ್ಯಮಕ್ಕೆ ಸದಾ ನಮ್ಮ ಪ್ರೋತ್ಸಾಹ ಇದೆ. ಜಿಲ್ಲೆಗಳಲ್ಲಿ ಇನ್ನು ಅಧಿಕ ಮಟ್ಟದಲ್ಲಿ ಉದ್ಯಮಗಳ ಅಗತ್ಯವಿದೆ. ಹೆಚ್ಚು ಕೈಗಾರಿಕೋಧ್ಯಮಗಳು ಜಿಲ್ಲೆಗಳಲ್ಲಿ ಬರಬೇಕು, ಆದರೆ ಮಾಲಿನ್ಯ ರಹಿತ ಉದ್ಯಮಕ್ಕೆ ಬೆಂಬಲಿಸೋಣ. ಪರಿಸರ ಸಂರಕ್ಷಣೆ ಅಗತ್ಯ. ಭೂಮಿ ತೆರವು ಮಾಡಿದಲ್ಲಿ ಭೂಮಿ ತೆರವು ಮಾಡಿದ ಸಂತೃಪ್ತ ಕುಟುಂಬದವರಿಗೆ ನ್ಯಾಯ ಒದಗಬೇಕು, ಉದ್ಯೋಗ ಅವಕಾಶ ದೊರಕಬೇಕು. ಕರ್ನಾಟಕ ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸುತ್ತಮುತ್ತ ಗ್ರಾಮದ ನಿವಾಸಿಗಳನ್ನು ಭೇಟಿಯಾಗಿ ಅವರಿಗೆ ನ್ಯಾಯ ಒದಗಿಸುವಲ್ಲಿ ಹೋರಾಡಬೇಕಾಗಿದೆ ಎಂದು ಅಭಿಪ್ರಾಯಿಸಿದರು.

ತೋನ್ಸೆ ಮಾತನಾಡಿ, ಹಿಂದೆ ನಮ್ಮವರು ಎಷ್ಟೇ ವಿದ್ಯಾವಂತರಾದರೂ, ಎಷ್ಟೇ ಶ್ರೀಮಂತರಾದರೂ ಸ್ವತ: ಕೃಷಿ ಮಾಡುವುದರಲ್ಲಿ ಹಿಂಜರಿಯುತ್ತಿರಲಿಲ್ಲ. ಆದರೆ ಅದನ್ನು ಈಗಿನ ಸಮಯಕ್ಕೆ ಹೋಲಿಸಿದರೆ ಅದು ತೀರಾ ಬದಲಾದಂತಿದೆ.
ನಮ್ಮ ಜಿಲ್ಲೆಗಳಲ್ಲಿ ಇದೀಗ ನಿರುದ್ಯೋಗ ಸಮಸ್ಯೆ ಅಧಿಕವಾಗಲು ಹಲವು ಕಾರಣಗಳಿದ್ದು ಅದರಲ್ಲಿ ಇದೂ ಸೇರಿದೆ. ನಾವು ನಮ್ಮ ಮುಂದಿನ ಜನಾಂಗದ ಭವಿಷ್ಯದ ಬಗ್ಗೆ, ನಮ್ಮ ಜಿಲ್ಲೆಗಳ ಭವಿಷ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿದೆ . ಇಂದು ಇಲ್ಲಿರುವ ವಿವಿಧ ಸಮುದಾಯದ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯವನ್ನು ಅರ್ಥಪೂರ್ಣವಾಗಿ ಮಂಡಿಸಿದ್ದಾರೆ. ಜಿಲ್ಲೆಗಳಲ್ಲಿ ಕನಿಷ್ಠ ಶೇಕಡ ಐವತ್ತರಷ್ಟು ಉದ್ಯೋಗ ಸ್ಥಳೀಯರಿಗೆ ಸಿಕ್ಕುವಂತಾಗಬೇಕು. ಇದು ಕಷ್ಟವಾಗಲಿಕ್ಕಿಲ್ಲ. ಯಾಕೆಂದರೆ ನಮ್ಮ ಜಿಲ್ಲೆಯ ಸಂಸದರು ಪಕ್ಷದ ಪ್ರಮುಖರು ಅದೇ ಕ್ಷೇತ್ರಕ್ಕೆ ಒಳಪಟ್ಟವರಾಗಿದ್ದು ಅವರ ಮೂಲಕವೂ ಇಂತಹ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ. ಸರಕಾರವು ಕೈಗಾರಿಕೆಗಾಗಿ ವಷಪಡಿಸುತ್ತಿರುವ ಕೊಲ್ಲೂರು ಹಾಗೂ ಉಳೆಪಾಡಿ ಯ 1091 ಎಕ್ರೆ ಜಾಗವು ನಮ್ಮವರಿಗೆ ಮಾರಕವಾಗದೆ ಮಾಲೀನ್ಯರಹಿತವಾಗಿ ಉದ್ಯೋಗವಾಕಾಶದೊಂದಿಗೆ ಪ್ರಯೋಜನಕಾರಿಯಾಗಲಿ. ನಮ್ಮ ಜಿಲ್ಲೆಗಳಲ್ಲಿರುವ ಎಲ್ಲಾ ಸಮುದಾಯದ ಜನರು ಮೇಲೆ ಬರಬೇಕು. ಒಂದು ಉತ್ತಮವಾದ ಉದ್ಯೋಗಾವಕಾಶ ನಮ್ಮ ಜಿಲ್ಲೆಯ ಪಾಲಾಗುತ್ತಿದೆ. ಕೈಗಾರಿಕಾ ಸಚಿವರನ್ನು ಬೇಟಿಯಾಗಿ ಈ ಬಗ್ಗೆ ಸೂಕ್ತ ಪರಿಹಾರ ಒದಗಿಸುವಂತೆ ಮಾಡೋಣ ಎಂದು ಹೇಳಿದರು.

ಮುಂಬಯಿ ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ಹರೀಶ್ ಅಮೀನ್ ಮಾತನಾಡಿ, ನಮ್ಮ ಸಮಿತಿಯು ಈ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ ಅಲ್ಲಿನ ಜನರ ಸಮಸ್ಯೆಯನ್ನು ಅರಿತು ಅವರ ಸಮಸ್ಯೆಗೆ ತಕ್ಕ ಪರಿಹಾರ ದೊರಕುವ ಬಗ್ಗೆ ಜಯಕೃಷ್ಣ ಶೆಟ್ಟಿಯವರ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ನಾವೆಲ್ಲರೂ ಪ್ರೋತ್ಸಾಹಿಸಬೇಕಾಗಿದೆ. ಈ ಯೋಜನೆ ಬಗ್ಗೆ ಹೆಚ್ಚಿನ ವಿವರವನ್ನು ಸಂಗ್ರಹಿಸಿ ಯಾವ ರೀತಿ ಮುಂದುವರಿಯುದಾಗಿ ಮುಂದೆ ಈ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಕೈಗೊಳ್ಳೋಣ. ಸರಕಾರವು ಉತ್ತಮ ಕೆಲಸವನ್ನು ಮಾಡುತ್ತಿದ್ದು ಸರಕಾರಕ್ಕೂ ನಾವು ಪ್ರೋತ್ಸಾಹಿಸಬೇಕಾಗಿದೆ ಎಂದು ತಿಳಿಸಿದರು.

ಮುಂಬಯಿ ಬಂಟರ ಸಂಘ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮಾತನಾಡಿ, ಕಳೆದ 22 ವರ್ಷಗಳಿಂದ ತೋನ್ಸೆ ಜಯಕೃಷ್ಣ ಶೆಟ್ಟಿ ಯವರು ನಮ್ಮ ಜಿಲ್ಲೆಗಳ ಬಗ್ಗೆ ಕಾಳಜಿವಹಿಸಿ ಜಿಲ್ಲೆಗಳ ಅಭಿವೃದ್ಧಿಗಾಗಿ ಕ್ರಿಯಾಶೀಲರಾಗಿದ್ದಾರೆ. ಅಭಿವೃದ್ಧಿ ಕೆಲಸವನ್ನು ಮಾಡುವಾಗ ಯಾವುದೇ ಸಮಸ್ಯೆ ಬಂದರೂ ಅದನ್ನು ನಾವು ಆಳವಾಗಿ ಅಧ್ಯಯನ ಮಾಡಬೇಕಾಗುತ್ತದೆ. ಇದಕ್ಕೆ ನಮ್ಮಲ್ಲಿ ನುರಿತ ಟೀಮ ಇದೆ. ನಮ್ಮದು ಪ್ರಜಾಪ್ರಭುತ್ವ ದೇಶವಾಗಿದ್ದು ಇಲ್ಲಿ ಬೇರೆಬೇರೆ ನಿಯಮಯನ್ನು ಪಾಲಿಸಬೇಕಾಗಿದೆ. ನಮಗೆ ಇನ್ನೊಬ್ಬರ ಜಾಗ ಹೋದಲ್ಲಿ ಅಷ್ಟು ಬೇಸರವಾಗದೆ ಇದ್ದರೂ ನಮ್ಮ ಸ್ಥಳ ಹೋದಾಗ ನಿಜವಾದ ಬೆಲೆ ತಿಳಿಯುತ್ತದೆ. ಜಯಕೃಷ್ಣ ಶೆಟ್ಟಿಯವರ ನೇತೃತ್ವದ ಸಮಿತಿಯು ಎಕ್ಸ್ಪರ್ಟ್ ಸಮಿತಿ ಆಗಿದೆ ಎಂಬುದರಲ್ಲಿ ಸಂದೇಹವಿಲ್ಲ ಎಂದರು.

- Advertisement -
spot_img

Latest News

error: Content is protected !!