ಬಂಟ್ವಾಳ: ಪುತ್ತೂರಿನಿಂದ ಮಂಗಳೂರಿಗೆ ಸಾಗುವಾಗ ಸಿಗುವ ಬ್ರಹ್ಮರಕೂಟ್ಲು ಟೋಲ್ ಅವ್ಯವಸ್ಥೆಯ ಆಗರವಾಗಿದೆ. ಅದರಲ್ಲೂ ಸದ್ಯ ಮಳೆಗಾಲದಲ್ಲಂತೂ ದೇವರಿಗೆ ಪ್ರೀತಿ ಎಂಬಂತಾಗಿದೆ.
ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದ ಬ್ರಹ್ಮರಕೂಟ್ಲು ಟೋಲ್ ಗೇಟ್ ಸಂಪೂರ್ಣವಾಗಿ ಅವೈಜ್ಞಾನಿಕತೆಯಿಂದ ಕೂಡಿದ್ದು ಅದೊಂದು ಹಣ ಸುಲಿಗೆಯ ಕೇಂದ್ರದಂತಿದೆ. ಮಳೆಗಾಲ ಆರಂಭವಾದ ಬಳಿಕ ಟೋಲ್ ಗೇಟ್ನ ರಸ್ತೆಯಲ್ಲಿ ಡಾಂಬರು ಕಿತ್ತು ಹೋಗಿದ್ದು ಬೃಹತ್ ಹೊಂಡಗಳು ಬಿದ್ದಿವೆ.ಆದರೂ ಈವರೆಗೆ ಅದನ್ನು ದುರಸ್ತಿ ಮಾಡಿಲ್ಲ.
ಒಂದು ಗೇಟ್ನಿಂದ ಮಾತ್ರ ವಾಹನಗಳು ಸಂಚರಿಸುತ್ತಿದೆ. ಹೊಂಡಗಳಿಂದಾಗಿ ವಾಹನಗಳ ಸಂಚಾರಕ್ಕೂ ಅಡಚಣೆಯಾಗಿದೆ. ಇಲ್ಲಿ ವಾಹನಗಳು ತಾಸುಗಟ್ಟಲೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಇದೆ. ದಿನನಿತ್ಯ ತುರ್ತು ವಾಹನಗಳು ಇಲ್ಲಿ ಸಿಲುಕಿಕೊಂಡು ಪರದಾಡುತ್ತವೆ.
ಅವ್ಯವಸ್ಥೆಯ ಬಗ್ಗೆ ಪ್ರಶ್ನಿಸುವ ವಾಹನ ಸವಾರರ ಮೇಲೆ ಟೋಲ್ ಸಿಬ್ಬಂದಿ ಸೇರಿ ಹಲ್ಲೆ ನಡೆಸುವ, ಗೂಂಡಾಗಿರಿ ಮಾಡುವ ಪ್ರಕರಣಗಳು ನಡೆಯುತ್ತಿವೆ. ಇಲ್ಲಿ ಟೋಲ್ ವಸೂಲಿಗೆ ಅಯೋಗ್ಯವಾದ ಪ್ರದೇಶವಾಗಿದೆ. ಆದರೆ ಇದರ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಮೌನವಾಗಿದ್ದಾರೆ.
ಈ ಮಾರ್ಗವಾಗಿ ಸಂಚರಿಸುವ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲು ಇದನ್ನೆಲ್ಲಾ ಕಂಡರೂ ಕಾಣದಂತೆ ಇದ್ದಾರೆ. ಈ ಬಗ್ಗೆ ಅವರು ಯಾವುದೇ ಕ್ರಮವಾಗಲಿ, ಪರಿಹಾರವಾಗಿ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬ್ರಹ್ಮರಕೂಟ್ಲು ಟೋಲ್ ಗೇಟ್ ನಿಂದ ಜಿಲ್ಲೆಯ ಜನರಿಗೆ ಮುಕ್ತಿ ನೀಡುವಂತೆ ಇಂದು ಬಂಟ್ವಾಳಕ್ಕೆ ಆಗಮಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಾಯಿಸಲು ಪಕ್ಷದಿಂದ ತೀರ್ಮಾನಿಸಲಾಗಿದೆ.
ಸಂಜೆಯ ವೇಳೆಗೆ ಮುಖ್ಯಮಂತ್ರಿ ಬಸವರಾಜ್
ಬೊಮ್ಮಾಯಿ ಬಂಟ್ವಾಳದಿಂದ ಮಂಗಳೂರಿಗೆ ತೆರಳುವ ವೇಳೆ ಟೋಲ್ ಗೇಟ್ ನಲ್ಲಿ ಪಕ್ಷದ ನಾಯಕರು,ಕಾರ್ಯಕರ್ತರು ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ಸೆಳೆಯಲು ಮುಂದಾಗಿದ್ದಾರೆ.