ಚಿಕ್ಕಮಗಳೂರು: ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಪೊಲೀಸ್ ಹೆಡ್ಕಾನ್ಸ್ಟೆಬಲ್ವೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದ ಬಳಿ ನಿನ್ನೆ ರಾತ್ರಿ ನಡೆದಿದೆ. 48 ವರ್ಷದ ಸಿದ್ದರಾಮಪ್ಪ ಮೃತ ದುರ್ದೈವಿ. ಇವತ್ತು ಅವರು ಎಎಸ್ಐ ಆಗಿ ಬಡ್ತಿ ಪಡೆಯಬೇಕಿತ್ತು. ಕಡೂರು ತಾಲೂಕಿನ ಸಖರಾಯಪಟ್ಟಣ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿದ್ದರಾಮಪ್ಪ ಚಿಕ್ಕಮಗಳೂರು ನಗರದಲ್ಲಿ ವಾಸವಿದ್ದರು. ನಿನ್ನೆ ಕರ್ತವ್ಯ ಮುಗಿಸಿ ಚಿಕ್ಕಮಗಳೂರು ನಗರಕ್ಕೆ ಹಿಂದಿರುಗುವಾಗ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಬಳಿ ಕಾರು-ಬೈಕ್ ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಮೂಲತಃ ಅಜ್ಜಂಪುರ ತಾಲೂಕಿನ ತಮ್ಮಟದಹಳ್ಳಿ ನಿವಾಸಿಯಾದ ಸಿದ್ದರಾಮಪ್ಪ 25 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು ಇಂದು ಎ.ಎಸ್.ಐ ಆಗಿ ಬಡ್ತಿ ಪಡಿಯುತ್ತಿದ್ದರು. ಪ್ರಮೋಷನ್ ಸಿಕ್ಕ ಖುಷಿಯಲ್ಲಿ ಎ.ಎಸ್.ಐ ಸಮವಸ್ತ್ರ ಕೂಡ ಸಿದ್ದ ಮಾಡಿಕೊಂಡಿದ್ದ ಸಿದ್ದರಾಮಪ್ಪ ಕರ್ತವ್ಯ ಮುಗಿಸಿ ಖುಷಿಯಿಂದ ಮನೆಗೆ ಬರುವಾಗ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಸಖರಾಯಪಟ್ಟಣ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲೆಯ ವಿವಿಧ ಠಾಣೆಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿ ಎ.ಎಸ್.ಐ. ಆಗಬೇಕಿದ್ದ ಸಿಬ್ಬಂದಿಯನ್ನ ಕಳೆದುಕೊಂಡ ಇಲಾಖೆಯ ಅವರ ಸಹೋದ್ಯೋಗಿಗಳು ಮರುಗಿದ್ದಾರೆ. 25 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಸಿದ್ದರಾಮಪ್ಪ ಸಾರ್ವಜನಿಕ ವಲಯದಲ್ಲಿ ಉತ್ತಮ ಹೆಸರು ಗಳಿಸಿದ್ದು, ಸರಳ ಸಜ್ಜನ ಪೊಲೀಸ್ ಅಂತಲೂ ಖ್ಯಾತಿ ಹೊಂದಿದ್ದಾರೆ. ಇವರ ಸಾವಿನಿಂದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.