ನವದೆಹಲಿ: ಕಡಲ ತೀರವನ್ನು ಸ್ವಚ್ಛಗೊಳಿಸಿದ ಉಡುಪಿ ಜಿಲ್ಲೆಯ ನವದಂಪತಿಗಳ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಇಂದಿನ ಮನ್ ಕಿ ಬಾತ್ ನಲ್ಲಿ ತಿಳಿಸಿ ಅವರ ಬಗ್ಗೆ ಶ್ಲಾಘನೀಯ ಮಾತುಗಳನ್ನಾಡಿದರು.
ಹೌದು, ಕಡಲತೀರವನ್ನು ಸ್ವಚ್ಚಗೊಳಿಸಿ ಮಧುಚಂದ್ರಕ್ಕೆ ಹೋಗುವ ಸಂಕಲ್ಪ ಮಾಡಿದ್ದ ಬೈಂದೂರಿನ ಅನುದೀಪ್ ಹೆಗಡೆ ಹಾಗೂ ಮಿನುಷಾ ಕಾಂಚನ್ ದಂಪತಿಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ವರ್ಷದ ಕೊನೆಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ಮಾತನಾಡುತ್ತಾ, “ಸೋಮೇಶ್ವರ ಬೀಚ್ ನಲ್ಲಿದ್ದ 800 ಕೆಜಿಗೂ ಅಧಿಕ ಕಸವನ್ನು ತೆಗೆದು ಸ್ವಚ್ಛಗೊಳಿಸಿದ ಅನುದೀಪ್ ಹಾಗೂ ವಿನುಷ ಜೋಡಿಯನ್ನು ಶ್ಲಾಘಿಸುತ್ತೇನೆ” ಎಂದು ತಿಳಿಸಿದರು.
ಕಡಲ ತೀರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ರಾಶಿ ಸೃಷ್ಟಿಯಾಗಲು ಕಾರಣ ಯಾರು ಎಂಬುದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ಅನುದೀಪ್ ಹಾಗೂ ಮಿನುಷಾ ದಂಪತಿಯಂತೆ ಎಲ್ಲರೂ ಪರಿಸರ ಸ್ವಚ್ಚಗೊಳಿಸುವ ಕೆಲಸ ಸಂಕಲ್ಪ ಮಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವೆಂಬರ್ 27ರಂದು ಸೋಮೇಶ್ವರ ಕಡಲ ತೀರದಲ್ಲಿ ಸ್ವಚ್ಛಗೊಳಿಸುವ ಮೂಲಕ ತಮ್ಮ ಪರಿಸರಪ್ರೇಮವನ್ನು ತೋರಿಸಿಕೊಂಡಿದ್ದಾರೆ ಬೈಂದೂರು ಮೂಲದ ನವ ಜೋಡಿಗಳು ಎಲ್ಲರ ಪ್ರಶಂಸೆಗೆ ಕಾರಣರಾಗಿದ್ದರು.