ಧರ್ಮಸ್ಥಳ : ಆಂಧ್ರಪ್ರದೇಶದಿಂದ ಧರ್ಮಸ್ಥಳಕ್ಕೆ ಪೈಪ್ ತಂದು ಇಳಿಸುತ್ತಿದ್ದಾಗ ಅಕಸ್ಮಿಕವಾಗಿ ಚಾಲಕನ ತಲೆ ಮೇಲೆ ಪೈಪ್ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಧರ್ಮಸ್ಥಳದಲ್ಲಿ ಫೇ.5 ರಂದು ನಡೆದಿದೆ.
ಧರ್ಮಸ್ಥಳದ ಮುಳಿಕ್ಕರ್ ಡ್ಯಾಂ ನಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನೀರಿನ ಪೈಪ್ ಹಾಕುವ ಕೆಲಸ ಸರಕಾರದಿಂದ ಆರಂಭವಾಗಿದ್ದು ಇದನ್ನು ಖಾಸಗಿ ಕಂಪನಿ ಗುತ್ತಿಗೆಯನ್ನು ಪಡೆದುಕೊಂಡಿದೆ. ಈ ಕೆಲಸಕ್ಕಾಗಿ ಆಂಧ್ರ ಪ್ರದೇಶದಿಂದ ಲಾರಿಗಳಲ್ಲಿ ಪೈಪ್ ಗಳನ್ನು ತಂದು ಧರ್ಮಸ್ಥಳದ ಬಾಹುಬಲಿ ಬೆಟ್ಟಕ್ಕೆ ಹೋಗುವ ರಸ್ತೆಯ ಪಕ್ಕದ ಖಾಲಿ ಜಾಗದಲ್ಲಿ ದಾಸ್ತಾನು ಮಾಡುತ್ತಿದ್ದಾರೆ. ಫೇ.5 ರಂದು ಎರಡು ಲಾರಿಗಳಲ್ಲಿ ಪೈಪ್ ಬಂದಿದ್ದು ಇದನ್ನು ಇಳಿಸಲು ಲಾರಿ ಚಾಲಕ ಕಬ್ಬಿಣದ ಚೈನ್ ನನ್ನು ತೆಗೆಯುವ ವೇಳೆ ಅಕಸ್ಮಿಕವಾಗಿ ತಲೆಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಆಂಧ್ರ ಪ್ರದೇಶ ಮೂಲದ ಲಾರಿ ಚಾಲಕ ಮಧುಸೂದನ್ ರೆಡ್ಡಿ (40) ಮೃತ ದುರ್ದೈವಿ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಮೃತದೇಹವನ್ನು ಬೆಳ್ತಂಗಡಿ ಶವಗಾರಕ್ಕೆ ಸಾಗಿಸಲಾಗಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.