ಕುಂದಾಪುರ:ಪ್ರೀತಿಸಿ ವಿವಾಹವಾದ ಪತ್ನಿಯೊಂದಿಗೆ ಪ್ರತಿ ದಿನ ಜಗಳವಾಗುತ್ತಿದ್ದರಿಂದ ಬೇಸರಗೊಂಡ ಫೋಟೋಗ್ರಾಫರ್ ಒಬ್ಬರು ನದಿಗೆ ಹಾರಿ ನಾಪತ್ತೆಯಾದ ಘಟನೆ ಕಂಡ್ಲೂರು ಎಂಬಲ್ಲಿ ಮಂಗಳವಾರ ನಡೆದಿದೆ. ಕಾಳಾವರ ಜನತಾ ಕಾಲನಿ ನಿವಾಸಿ ಹರೀಶ್ (44) ನದಿಗೆ ಹಾರಿದ ವ್ಯಕ್ತಿ.
ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ ಹರೀಶ್ ಸುಮಾರು 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಯಾಗಿದ್ದರು. ಇತ್ತೀಚಿಗೆ ದಂಪತಿ ನಡುವೆ ಗಲಾಟೆಯಾಗುತ್ತಿತ್ತು. ಜು.16ರಂದು ಹರೀಶ್ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಿದ್ದರು. ಪೊಲೀಸರು ಹರೀಶ್ ರನ್ನು ಕರೆದುಕೊಂಡು ಬರುವಂತೆ ಹೇಳಿದ್ದರು. ಅದರಂತೆ ಹರೀಶ್ ಠಾಣೆಗೆ ಬಂದಿದ್ದು ದಂಪತಿಗೆ ಪೊಲೀಸರು ಬುದ್ದಿ ಮಾತನ್ನು ಹೇಳಿ ಮುಂದಕ್ಕೆ ಒಳ್ಳೆಯ ರೀತಿಯಲ್ಲಿ ಜೀವನ ನಡೆಸುವಂತೆ ಬುದ್ಧಿ ಹೇಳಿ ಕಳುಹಿಸಿದ್ದರು.
ಅದರಂತೆ ತಾವು ಬಾಡಿಗೆ ಮಾಡಿಕೊಂಡು ಬಂದ ಆಟೋ ರಿಕ್ಷಾದಲ್ಲಿ ಹರೀಶ್, ಅವರ ಪತ್ನಿ, ಹಾಗೂ ಸಹೋದರಿ ಹೊರಟಿದ್ದು ಆಟೋ ರಿಕ್ಷಾವು ಕಂಡ್ಲೂರು ಸೇತುವೆಯ ಮೇಲೆ ಬರುತ್ತಿರುವಾಗ ಹರೀಶ್ ರಿಕ್ಷಾ ಚಾಲಕನಲ್ಲಿ ನಿಲ್ಲಿಸುವಂತೆ ಹೇಳಿದ್ದು ಆಟೋ ವೇಗ ಕಡಿಮೆ ಮಾಡಿದಾಗ ಹರೀಶ್ ಒಮ್ಮೇಲೆ ರಿಕ್ಷಾದಿಂದ ಕೆಳಕ್ಕೆ ಇಳಿದು ಸೇತುವೆಯ ತಡೆಬೇಲಿಯನ್ನು ಹಾರಿ ಕಂಡ್ಲೂರು ವಾರಾಹಿ ನದಿಗೆ ಹಾರಿ, ನಾಪತ್ತೆಯಾಗಿದ್ದಾರೆ. ಇದೀಗ ನಾಪತ್ತೆಯಾದ ಮಗ ಹರೀಶ್ನನ್ನು ಪತ್ತೆ ಹಚ್ಚಿಕೊಡಬೇಕೆಂದು ತಂದೆ ದೂರು ನೀಡಿದ್ದಾರೆ.
ಹರೀಶ್ ಅವರ ಹುಡುಕಾಟಕ್ಕೆ ಪೊಲೀಸರು, ಅಗ್ನಿಶಾಮಕ, ಸ್ಥಳೀಯರು, ಮೀನುಗಾರರು ವ್ಯಾಪಕ ಶೋಧ ನಡೆಸಿದ್ದು ಮಳೆ ಹಿನ್ನೆಲೆ ನೀರಿನ ಹರಿವು ಹೆಚ್ಚಿರುವ ಕಾರಣ ಸಾಧ್ಯವಾಗಿಲ್ಲ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.