ಹೈದರಾಬಾದ್: 9 ವರ್ಷ ಕಾದು ಮಗಳಿಗೆ ಮುಖ್ಯಮಂತ್ರಿಗಳಿಂದಲೇ ದಂಪತಿ ನಾಮಕರಣ ಮಾಡಿಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮುಳುಗು ಜಿಲ್ಲೆಯ ಭೂಪಾಲಪಲ್ಲಿ ಮಂಡಲದ ನಂದಿಗಾಮ ಗ್ರಾಮದ ಸುರೇಶ್ ಮತ್ತು ಅನಿತಾ ದಂಪತಿಗೆ 2013ರಲ್ಲಿ ಮಗಳು ಜನಿಸಿದ್ದಳು. ಅಂದು ಪೋಷಕರು. ಮಗಳಿಗೆ ತಮ್ಮ ನೆಚ್ಚಿನ ನಾಯಕ ಕೆಸಿಆರ್ ಹೆಸರಿಡಬೇಕೆಂದು ಬಯಸಿದ್ದರು. ಈ ಆಸೆ ಒಂಬತ್ತು ವರ್ಷವಾದ್ರೂ ಈಡೇರಲಿಲ್ಲ. ಆದ್ರೂ ಬಾಲಕಿಗೆ ಯಾವುದೇ ಹೆಸರನ್ನು ಸೂಚಿಸಲೇ ಇಲ್ಲ.
ತಮ್ಮ ಮಗಳಿಗೆ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರಿಂದಲೇ ನಾಮಕರಣ ಮಾಡಿಸಬೇಕು ಎಂದು ಕಾದು ತೆಲಂಗಾಣದ ದಂಪತಿ ಬರೋಬ್ಬರಿ 9 ವರ್ಷಗಳ ನಂತರ ಬಾಲಕಿಗೆ ನಾಮಕರಣ ಮಾಡಿದ್ದಾರೆ.
ತೆಲಂಗಾಣ ರಾಷ್ಟ್ರ ಸಮಿತಿಯ ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಅಸೆಂಬ್ಲಿ ಸ್ಪೀಕರ್ ಮಧುಸೂಧನ ಚಾರಿ ಅವರಿಗೆ ಇತ್ತೀಚೆಗೆ ಈ ವಿಷಯ ತಿಳಿಯಿತು. ನಂತರ ಅವರು ದಂಪತಿ ಮತ್ತು ಮಗುವನ್ನು ತೆಲಂಗಾಣ ಮುಖ್ಯಮಂತ್ರಿಯ ಅಧಿಕೃತ ನಿವಾಸ ಪ್ರಗತಿ ಭವನಕ್ಕೆ ಕರೆತಂದರು. ವಿಷಯ ತಿಳಿದ ಕೆಸಿಆರ್ ದಂಪತಿ ಸುರೇಶ್ ಮತ್ತು ಅನಿತಾ ಅವರನ್ನು ಅಭಿನಂದಿಸಿ ಒಂಬತ್ತು ವರ್ಷದ ಮಗಳಿಗೆ ‘ಮಹತಿ’ ಎಂದು ನಾಮಕರಣ ಮಾಡಿದರು.
ಇದೇ ವೇಳೆ ಕೆಸಿಆರ್ ದಂಪತಿಗಳಿಗೆ ಉಡುಗೊರೆಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲದೇ, ಮಹತಿಯ ಶಿಕ್ಷಣಕ್ಕೆ ಆರ್ಥಿಕ ಸಹಾಯವನ್ನು ಘೋಷಿಸಿದ್ದಾರೆ.