ಸುಳ್ಯ; ಅಜ್ಜಾವರದಲ್ಲಿ ಕೆರೆಗೆ ಬಿದ್ದಿದ್ದ ನಾಲ್ಕು ಕಾಡಾನೆಗಳನ್ನು ಮೇಲಕ್ಕೆತ್ತುವ ಕಾರ್ಯಾಚರಣೆ ಯಶಸ್ವಿಯಾಗಿದೆ. ನಿನ್ನೆ ರಾತ್ರಿ ಅಜ್ಜಾವರ ಗ್ರಾಮದ ತುದಿಯಡ್ಕ ಎಂಬಲ್ಲಿ ತೋಟದ ಮಧ್ಯೆ ದೊಡ್ಡ ಕೆರೆಗೆ ಎರಡು ದೊಡ್ಡ ಆನೆಗಳು ಮತ್ತು ಎರಡು ಚಿಕ್ಕ ಮರಿ ಆನೆಗಳು ಸೇರಿ ನಾಲ್ಕು ಆನೆಗಳ ಹಿಂಡು ಕೆರೆಗಿಳಿದಿದ್ದು ಬಾಕಿಯಾಗಿದ್ದವು. ಕೆರೆಯಲ್ಲಿ ನೀರಿದ್ದರಿಂದ ಅವುಗಳು ಮೇಲಕ್ಕೆ ಬರಲಾಗದೇ ಪರದಾಡುತ್ತಿದ್ದವು.
ವಿಷಯ ತಿಳಿದು ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗು ಸಿಬ್ಬಂದಿ ಸ್ಥಳಕ್ಕೆ ಬಂದು ಸ್ಥಳೀಯರ ಸಹಕಾರದಿಂದ ರಕ್ಷಣಾ ಕಾರ್ಯ ಕೈಗೊಂಡರು.ಅದರಂತೆ ಕೆರೆಯ ಬದಿಯಲ್ಲಿ ಅಗೆತ ಮಾಡಿ ಮಣ್ಣು, ಮರಳು ಕಲ್ಲು ಹಾಕಿ ಆನೆಗಳಿಗೆ ಮೇಲೆ ಬರಲು ದಾರಿ ಮಾಡಿ ಕೊಟ್ಟಿದ್ದಾರೆ. ಕೆರೆಯಿಂದ ಈ ದಾರಿಯ ಮೂಲಕ ಆನೆಗಳು ಮೇಲೆ ಬಂದವು. ಒಂದು ಮರಿ ಆನೆಗೆ ಮೇಲೆ ಬರಲು ಸ್ವಲ್ಪ ಕಷ್ಟವಾಯಿತು. ಬಳಿಕ ಅದನ್ನು ಹಗ್ಗದ ಸಹಾಯದಿಂದ ಎಳೆದು ಹಿಂದಿನಿಂದ ದೂಡಿ ಕೆರೆಯಿಂದ ಮೇಲಕ್ಕೆ ತರಲಾಯಿತು. ಕೊನೆಗೆ ಕಾಡಾನೆಗಳು ಕಾಡಿನತ್ತ ಹೆಜ್ಜೆ ಹಾಕಿದವು.