ಉಡುಪಿ: 25 ಲಕ್ಷ ಹಣ ಬಹುಮಾನ ಬಂದಿರುವುದಾಗಿ ನಂಬಿಸಿ ಆನ್ಲೈನ್ ಮುಖಾಂತರ ವ್ಯಕ್ತಿಯೊಬ್ಬರಿಗೆ 5,63,150 ಲಕ್ಷ ರೂ. ವಂಚಿಸಿದ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿಗಳು ದಿವಾಕರ್ ಎಂಬುವವರ ವಾಟ್ಸ್ ಆಪ್ ನಂಬರಿಗೆ ವಾಯ್ಸ್ ಸಂದೇಶ ಕಳುಹಿಸಿ 25 ಲಕ್ಷ ಹಣ ಬಹುಮಾನ ಬಂದಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಇದಕ್ಕೆ ಬಹುಮಾನಕ್ಕೆ ಸಂಬಂಧಿಸಿದ ದಾಖಲಾತಿಗಳನ್ನುಕೂಡ ವಾಟ್ಸ್ ಆಪ್ ಗೆ ಕಳುಹಿಸಿ ದಿವಾಕರ್ ಅವರು ನಂಬುವಂತೆ ಮಾಡಿದ್ದಾರೆ. ನಂತರ ಯಾರೋ ಅಪರಿಚಿತ ವ್ಯಕ್ತಿಗಳು ದೂರವಾಣಿ ಕರೆ ಮಾಡಿ, ವಿವಿಧ ಇಲಾಖೆಯ ಅಧಿಕಾರಿಗಳೆಂದು ನಂಬಿಸಿ ಬಹುಮಾನದ ಮೊತ್ತಕ್ಕೆ ಡಿಪಾಸಿಟ್ ಹಣವನ್ನು ಕಟ್ಟುವಂತೆ ತಿಳಿಸಿದ್ದಾರೆ.
ಆ ಬಳಿಕ ಎಸ್.ಬಿ.ಐ, ಐಡಿಬಿಐ ಬ್ಯಾಂಕ್ ಗಳ ವಿವಿಧ ಖಾತೆಗಳನ್ನು ನೀಡಿದ್ದು, ಇದನ್ನು ನಂಬಿದ ದಿವಕಾರ್ ಜಲ್ದಿ ಕ್ಯಾಶ್ ನಿಂದ ರೂಪಾಯಿ 1,90,000 ಹಾಗೂ ಐಡಿಐಬಿ ಬ್ಯಾಂಕ್ ನಿಂದ ಉಡುಪಿಯಿಂದ ರೂಪಾಯಿ 3,73,150 ರಂತೆ ಒಟ್ಟು ರೂಪಾಯಿ 5,63,150 ಹಣವನ್ನು ಡಿಪಾಸಿಟ್ ಮಾಡಿದ್ದಾರೆ.
ಆ ಬಳಿಕ ಬಹುಮಾನದ ಹಣವನ್ನು ನೀಡದೆ, ಡಿಪಾಸಿಟ್ ಮಾಡಿಸಿಕೊಂಡ ಹಣವನ್ನು ಕೂಡ ವಾಪಾಸ್ಸು ನೀಡದೆ ಒಟ್ಟು ರೂಪಾಯಿ 5,63,150ಹಣವನ್ನು ಮೋಸ ಮಾಡಿರುವುದಾಗಿ ಸೆನ್ ಅಪರಾಧ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.