ಕುಂದಾಪುರ; ಸುಡುಮಣ್ಣಿಗೆ ಹಾಕಿದ್ದ ಬೆಂಕಿ ನಂದಿಸಲು ಹೋದಾಗ ಬೆಂಕಿ ತಗುಲಿ ವೃದ್ಧ ಸಜೀವ ದಹನವಾಗಿರುವ ಘಟನೆ ಕುಂದಾಪುರ ತಾಲೂಕಿನ ಕಾಳಾವರದ ಬಡಾಗುಡ್ಡೆ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.ಕಾಳಾವರ ನಿವಾಸಿ ಮಹಾಲಿಂಗ ದೇವಾಡಿಗ (80) ಮೃತ ವೃದ್ಧ.
ಮಹಾಲಿಂಗ ದೇವಾಡಿಗ ಕೃಷಿ ಉದ್ದೇಶಕ್ಕಾಗಿ ತಮ್ಮ ಗದ್ದೆಯಲ್ಲಿ ಮಗಳು ಬೇಬಿಯೊಂದಿಗೆ ಕೃಷಿ ತ್ಯಾಜ್ಯ(ಸುಡುಮಣ್ಣಿಗಾಗಿ)ಕ್ಕೆ ಬೆಂಕಿ ಹಾಕಿದ್ದರು. ಈ ವೇಳೆ ಬೆಂಕಿಯ ಕೆನ್ನಾಲಿಗೆ ಸುತ್ತಮುತ್ತ ಆವರಿಸಿದ್ದು, ಇದರಿಂದ ಕೂಡಲೇ ಎಚ್ಚೆತ್ತ ಬೇಬಿ ಅಲ್ಲಿಗೆ ತೆರಳಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದರು. ಆದರೆ ಮಹಾಲಿಂಗ ದೇವಾಡಿಗ ಅವರು ಬೆಂಕಿಯ ಮಧ್ಯೆ ಸಿಲುಕಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಕೂಡಲೇ ಅಗ್ನಿಶಾಮಕದಳದವರಿಗೆ ಮಾಹಿತಿ ನೀಡಲಾಯಿತು. ಆದರೆ ಅಗ್ನಿಶಾಮಕದಳದ ವಾಹನ ಸ್ಥಳಕ್ಕೆ ಬರಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದ ಹಿನ್ನೆಲೆ ಕಾರ್ಯಾಚರಣೆಗೆ ತೊಡಕಾಗಿತ್ತು. ಇದರಿಂದ ರೈತ ಸಜೀವ ದಹನವಾಗಿದ್ದಾರೆ. ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.