ಬೆಂಗಳೂರು (ಜು. 21): ಈಗ ಮತ್ತೆ ನನಗೆ ಲವ್ ಲೆಟರ್ ಬರ್ತಾ ಇವೆ. ಇಡಿ, ಐಟಿ ಅವರಿಗೆ ನನ್ನನ್ನು 1 ವರ್ಷ ಬಿಟ್ಟು ಬಿಡ್ರಪ್ಪಾ ಎಂದು ಪತ್ರ ಬರೆದಿದ್ದೇನೆ ಎಂದು ಡಿಕೆಶಿ ವ್ಯಂಗ್ಯವಾಡಿದ್ದಾರೆ. ಎರಡು, ಮೂರು ವರ್ಷ ಬಿಟ್ಟು ಚಾರ್ಜ್ ಶೀಟ್ ಹಾಕಿದ್ದಾರೆ. ನನ್ನ ಜೊತೆ ವ್ಯವಹಾರ ಮಾಡಿವರಿಗೆ ನೋಟಿಸ್ ನೀಡುತ್ತಿದ್ದಾರೆ. ರಾಮನಗರ ಅಭ್ಯರ್ಥಿ ಸೇರಿದಂತೆ, ನನ್ನ ಜೊತೆ ವ್ಯವಹಾರ ಮಾಡಿದವರಿಗೆ ನೋಟಿಸ್ ಕೊಟ್ಟು ಕರೆಯುತ್ತಿದ್ದಾರೆ. ನನ್ನಂಥವರಿಗೆ ಕಿರುಕುಳ ಕೊಡುತ್ತಿದ್ದಾರೆ ಎಂದಿದ್ದಾರೆ.
ನನಗೆ ಇಡಿ, ಸಿಬಿಐ, ತಿಹಾರ್ ಜೈಲಿನ ಅನುಭವ ಇದೆ. ಈಗ ನನ್ನ ಜೊತೆ ವ್ಯವಹಾರ ಮಾಡುವವರನ್ನು ತನಿಖೆಗೆ ಕರೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ನನಗೆ ರಾಹುಲ್ ಗಾಂಧಿಯಿಂದ ಕರೆ ಬಂತು, ಹಳೇ ರೋಗಿಗೆ ಹೊಸ ರೋಗಿ ಕಾಲ್ ಮಾಡ್ತಿದ್ದೇನೆ ಎಂದರು. ಅವರ ಜೊತೆಗೆ ಕೆಲವು ವಿಚಾರ ಹಂಚಿಕೊಂಡೆ. ದೆಹಲಿಗೆ ಹೋದಾಗ ಇಡಿ ವಿಚಾರಣೆ ಬಗ್ಗೆ ಕೇಳಿದೆ , ವಿಚಾರಣೆಯಿಂದ ಅವರು ಮಾನಸಿಕವಾಗಿ ಕುಗ್ಗಿರಲಿಲ್ಲ. ನಾನು ತಿಹಾರ್ ಜೈಲಿನಲ್ಲಿದ್ದಾಗ ಸೋನಿಯಾ ಗಾಂಧಿ ಭೇಟಿ ನೀಡಿ ಶಕ್ತಿ ತುಂಬಿದ್ದರು. ಇವತ್ತು ನಾವು ಆ ಕೆಲಸ ಮಾಡಬೇಕಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಬಗ್ಗೆ ಚುನಾವಣಾ ಆಯೋಗ, ಆದಾಯ ತೆರಿಗೆ ಇಲಾಖೆ ಕೂಡಾ ತಪ್ಪಿಲ್ಲ ಎಂದು ಹೇಳಿದೆ. ಹೀಗಿದ್ದರೂ ತನಿಖೆಯ ಹೆಸರಿನಲ್ಲಿ ಕಿರುಕುಳ ಕೊಡುತ್ತಿದ್ದಾರೆ. ಸೋನಿಯಾ, ರಾಹುಲ್ ಗಾಂಧಿ ಅವರನ್ನು ಹೆದರಿಸಿದರೆ ಎಲ್ಲರು ನಿಮ್ಮ ಪಕ್ಷಕ್ಕೆ ಬರುತ್ತಾರೆ ಎಂಬುದು ನಿಮ್ಮ ಭ್ರಮೆ . ಶಾಂತಿಯಿಂದ ಪ್ರತಿಭಟನೆ ಮಾಡಬೇಕು, ಎರಡು ಕಡೆ ಕಾರಿಗೆ ಬೆಂಕಿ ಹಾಕಿದ್ದಾರೆ ಎಂಬ ಮಾಹಿತಿ ಬಂದಿದೆ. ಈ ರೀತಿ ಮಾಡದೆ ಶಾಂತಿ ಕಾಪಾಡಬೇಕು ಎಂದ ಡಿಕೆ ಶಿವಕುಮಾರ್ ಮನವಿ ಮಾಡಿಕೊಂಡಿದ್ದಾರೆ.