ಚಿಕ್ಕಬಳ್ಳಾಪುರ: ಹುಟ್ಟುಹಬ್ಬಕ್ಕೆ ಗಂಡ ಹೊಸ ಬಟ್ಟೆ ಕೊಡಿಸಿಲ್ಲವೆಂದು ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ವಾಲ್ಮೀಕಿನಗರದಲ್ಲಿ ನಡೆದಿದೆ. 17 ವರ್ಷದ ವಿವಾಹಿತೆ ಮಮತಾ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಹುಟ್ಟುಹಬ್ಬಕ್ಕೆ ಬಟ್ಟೆ ಕೊಡಿಸಿಲ್ಲವೆಂದು ಮಮತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದ್ದು ಮೃತ ಮಮತಾಳ ಪೋಷಕರು ಪತಿಯೇ ಕೊಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಸದ್ಯ ಮಹಾದೇವ್ ಅಲಿಯಾಸ್ ಮಣಿಕಂಠನನ್ನು ಗುಡಿಬಂಡೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಮಹಾದೇವ್ ಅಪ್ರಾಪ್ತೆಯನ್ನು ಪ್ರೀತಿಸಿ ಕಾನೂನುಬಾಹಿರವಾಗಿ ಬಲವಂತವಾಗಿ ಮದುವೆಯಾಗಿದ್ದನಂತೆ. ಮಹಾದೇವ್ ಅಲಿಯಾಸ್ ಮಣಿಕಂಠನೇ ನನ್ನ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ. ಪ್ರೀತಿ ಹೆಸರಲ್ಲಿ ಮದುವೆಯಾಗಿ ನಂಬಿಸಿ ಮೋಸ ಮಾಡಿ ಈಗ ಕೊಲೆನೂ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಗುಡಿಬಂಡೆ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಬಳಿಕವೇ ಸತ್ಯ ಹೊರ ಬೀಳಲಿದೆ.