ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಕೇಂದ್ರ ಹೈಕಮಾಂಡ್ ಉಚ್ಚಾಟನೆ ಮಾಡಿದ್ದು, ಇದೀಗ ಹೈಕಮಾಂಡ್ ನ ನಿಲುವನ್ನು ಖಂಡಿಸಿ 174 ಪದಾಧಿಕಾರಿಗಳು ಅಧಿಕೃತವಾಗಿ ಮಾ.27 ಗುರುವಾರದಂದು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ವಿಜಯಪುರ ನಗರ ಮಂಡಲದ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಎಲ್ಲ ಮೋರ್ಚಾಗಳ 174 ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಈ ಬಗ್ಗೆ ಹೇಳಿಕೆ ನೀಡಿರುವ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಂಕರ ಹೂಗಾರ ಅವರು ಬೇಸರವನ್ನು ವ್ಯಕ್ತಪಡಿಸಿದ್ದು, . ನೇರ ನಿಷ್ಠರತೆ, ಹಿಂದುತ್ವ, ಹಿಂದೂಗಳ ಪರವಾಗಿ ಗಟ್ಟಿ ಧ್ವನಿಯಾದ, ಉತ್ತರ ಕರ್ನಾಟಕ ಭಾಗದ ಅನ್ಯಾಯದ ವಿರುದ್ಧ ಸದಾ ಗಟ್ಟಿ ನಿಲುವು ತಾಳುವ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವ ಕೇಂದ್ರ ಹೈಕಮಾಂಡ್ ನಿಲುವನ್ನು ಖಂಡಿಸಿ, ಜಿಲ್ಲಾಧ್ಯಕ್ಷ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದೇನೆ ಎಂದು ತಿಳಿಸಿದ್ದಾರೆ.
ರಾಜೀನಾಮೆ ನೀಡಿರುವ ಪದಾಧಿಕಾರಿಗಳು: ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳು-2, ಉಪಾಧ್ಯಕ್ಷರು-6, ಕಾರ್ಯದರ್ಶಿಗಳು- 5, ಸಾಮಾಜಿಕ ಜಾಲತಾಣದ ಸಂಚಾಲಕರು, ಸಹ ಸಂಚಾಲಕರು-3, ಮಾಧ್ಯಮ ಪ್ರಮುಖರು-2, ಕಾರ್ಯಾಲಯ ಕಾರ್ಯದರ್ಶಿ-1, ಕಾನೂನು ಪ್ರಕೋಷ್ಠ-1, ಕೋಶಾಧ್ಯಕ್ಷರು-1, ಕಾರ್ಯಕಾರಿಣಿ ಸದಸ್ಯರು ಸೇರಿ 60 ಜನ ಪದಾಧಿಕಾರಿಗಳು ಹಾಗೂ ಯುವ ಮೋರ್ಚಾದ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿ 12, ಎಸ್.ಸಿ.ಮೋರ್ಚಾದ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿ 15 ಜನರು, ರೈತ ಮೋರ್ಚಾದ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿ 14, ಎಸ್ಟಿ ಮೋರ್ಚಾ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿ 11, ಮಹಿಳಾ ಮೋರ್ಚಾದ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿ 13, ಒಬಿಸಿ ಮೋರ್ಚಾದ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು 12, ಅಲ್ಪಸಂಖ್ಯಾತ ಮೋರ್ಚಾದ 10 ಜನ ಪದಾಧಿಕಾರಿಗಳು ಸೇರಿ ಒಟ್ಟು 174 ಪದಾಧಿಕಾರಿಗಳು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.