ಮೈಸೂರು: ಮಂಗಗಳಿಗೆ ಆಹಾರ ಮತ್ತು ವೈದ್ಯಕೀಯ ಸೇವೆ ಒದಗಿಸುವ ಉದ್ದೇಶದಿಂದ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ’ಮಂಕಿ ಪಾರ್ಕ್’ (ಮಂಗಗಳ ಉದ್ಯಾನವನ) ನಿರ್ಮಾಣ ಮಾಡಲು ಸರ್ಕಾರ ಮುಂದಾಗಿವೆ.
ಈ ಮೊದಲು ಮಂಗಗಳ ಹಾವಳಿಗೆ ‘ಬ್ರೇಕ್’ ಹಾಕುವ ಉದ್ದೇಶದಿಂದ ಶಿವಮೊಗ್ಗದಲ್ಲಿ ಮೊದಲ ‘ಮಂಕಿ ಉದ್ಯಾನವನ’ ನಿರ್ಮಿಸಲು ಸರ್ಕಾರ ಮುಂದಾಗಿತ್ತು. ಆದರೆ, ನಾನಾ ಕಾರಣಗಳಿಂದ ಯೋಜನೆ ಮೂಲೆ ಗುಂಪಾಯಿತು. ಇದೀಗ, ಮೈಸೂರಿನಲ್ಲಿ ‘ಮಂಕಿ ಪಾರ್ಕ್’ ಆರಂಭಿಸಲು ಯೋಜಿಸಲಾಗಿದೆ.
ಈ ಕುರಿತು ಶಾಸಕ ಎಸ್ ಎ ರಾಮದಾಸ್, “ನಾಲ್ಕು ಎಕರೆ ಜಾಗದಲ್ಲಿ ಸುಮಾರು ಎರಡು ಕೋಟಿ ವೆಚ್ಚದಲ್ಲಿ ‘ಮಂಕಿ ಪಾರ್ಕ್’ ನಿರ್ಮಾಣವಾಗಲಿದ್ದು, ಅಲ್ಲಿ ಮಂಗಗಳಿಗೆ ಆಹಾರ ಮತ್ತು ವೈದ್ಯಕೀಯ ಸೇವೆಯನ್ನು ಒದಗಿಸಲಾಗುವುದು. ಸಾರ್ವಜನಿಕರೂ ಕೂಡ ಮಂಗಗಳಿಗೆ ಬೇಕಾದ ಆಹಾರ ನೀಡಲು ಅವಕಾಶವಿದೆ” ಎಂದು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ಹೀಗೆ ವರದಿ ಮಾಡಿದೆ.
“ಮೈಸೂರು ನಗರ ಪಾಲಿಕೆ (ಎಂಸಿಸಿ), ಪಶುವೈದ್ಯಕೀಯ ಮತ್ತು ಪಶುಸಂಗೋಪನೆ ವಿಭಾಗವು ಯೋಜನೆಯನ್ನು ಅನುಷ್ಠಾನಗೊಳಿಸಲಿವೆ. ಸಾಕಷ್ಟು ಅರಣ್ಯ ಭೂಮಿ ಲಭ್ಯವಿರುವುದರಿಂದ ಈ ಯೋಜನೆ ಅನುಷ್ಠಾನಕ್ಕೆ ಯಾವುದೇ ತೊಂದರೆಯಾಗುವುದಿಲ್ಲ” ಎಂದು ರಾಮದಾಸ್ ಹೇಳಿದ್ದಾರೆ.
ಇನ್ನು ಈ ವಿಚಾರದ ಕುರಿತು ಪ್ರತಿಕ್ರಯೆ ನೀಡಿದ ಪರಿಸರ ಹೋರಾಟಗಾರ ಶೈಲಜೇಶ ಎಸ್. ಅವರು, ಬೆಟ್ಟಗಳಲ್ಲಿ ‘ಮಂಕಿ ಪಾರ್ಕ್’ ರಚಿಸುವುದರಿಂದ ಪರಿಸರ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ. ಬಹುತೇಕ ಪ್ರವಾಸಿ ತಾಣಗಳಲ್ಲಿ ಮಂಗಗಳ ಕಾಟ ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಚಾಮುಂಡಿ ಬೆಟ್ಟದಲ್ಲಿ ‘ಮಂಕಿ ಪಾರ್ಕ್’ ರಚಿಸುವುದು ಉಚಿತವಲ್ಲ” ಎಂದು ಹೇಳಿದ್ದಾರೆ.