ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ನಗರ ಕರಾಚಿಯಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆದಿದೆ. ಹಿಂದೂ ದೇಗುಲದ ಮೇಲೆ ಮತಾಂಧ ದುಷ್ಕರ್ಮಿಗಳು ದಾಳಿ ನಡೆಸಿ ಹಾಳುಗೆಡವಿದ್ದಾರೆ. ಭಾರತದಲ್ಲಿನ ಅಲ್ಪಸಂಖ್ಯಾತ ಮುಸ್ಲಿಮರ ಪರವಾಗಿ ಸುಖಾಸುಮ್ಮನೆ ದನಿ ಎತ್ತುವ ಪಾಕಿಸ್ತಾನದಲ್ಲಿ, ಅಲ್ಲಿನ ಅಲ್ಪಸಂಖ್ಯಾತರಾದ ಹಿಂದೂಗಳ ಮೇಲೆ ಪದೇ ಪದೇ ದಾಳಿ ನಡೆಯುತ್ತಿದ್ದು, ಇದೀಗ ಹೊಸ ಸೇರ್ಪಡೆ ಎಂಬಂತೆ ಕರಾಚಿಯ ಘಟನೆ ನಡೆದಿದೆ.
ಬಂದರು ನಗರಿ ಕರಾಚಿಯ ಕೊರಂಗಿ ನಂಬರ್ 5 ಎಂಬ ಪ್ರದೇಶದಲ್ಲಿ ಹಿಂದೂಗಳ ಮೇಲೆ ದಾಳಿ ನಡೆದಿದೆ. ಇಲ್ಲಿನ ಶ್ರೀ ಮಾರಿ ಮಾತಾ ಮಂದಿರದ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ದೇಗುಲದ ಸನಿಹದಲ್ಲೇ ಇರುವ ಹಿಂದೂ ಅರ್ಚಕರ ಮನೆ ಮೇಲೂ ದಾಳಿ ನಡೆಸಿದ್ದಾರೆ. ಬುಧವಾರ ರಾತ್ರಿ ಈ ಕೃತ್ಯ ನಡೆದಿದೆ ಎಂದು ತಿಳಿದು ಬಂದಿದೆ. ಈ ಘಟನೆಯಿಂದ ಪಾಕಿಸ್ತಾನದಲ್ಲಿ ಇರುವ ಹಿಂದೂಗಳು ಮತ್ತಷ್ಟು ಭಯಭೀತರಾಗಿದ್ದಾರೆ.
ದೇಗುಲ ಹಾಗೂ ಅರ್ಚಕರ ಮನೆ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು, ಅರ್ಚಕರ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲ, ದೇಗುಲದ ಒಳಗೆ ನುಗ್ಗಿ ವಿಗ್ರಹಗಳನ್ನು ಧ್ವಂಸ ಮಾಡಿದ್ದಾರೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಪೊಲೀಸರು ಈವರೆಗೆ ಯಾರನ್ನೂ ಬಂಧಿಸಿಲ್ಲ. ಇಲ್ಲಿನ ದೇಗುಲವು ನಿರ್ಮಾಣ ಹಂತದಲ್ಲಿ ಇತ್ತು. ದೇಗುಲದಲ್ಲಿ ಪ್ರತಿಷ್ಠಾಪನೆ ಮಾಡಲು ಕೆಲ ದಿನಗಳ ಹಿಂದಷ್ಟೇ ವಿಗ್ರಹಗಳನ್ನು ತರಿಸಿ ದೇಗುಲದಲ್ಲಿ ಇಡಲಾಗಿತ್ತು.
ನಮ್ಮ ಮೇಲೆ ಯಾರು ದಾಳಿ ನಡೆಸಿದರು, ಏಕೆ ದಾಳಿ ನಡೆಸಿದರು ಅನ್ನೋದೇ ಗೊತ್ತಾಗುತ್ತಿಲ್ಲ ಎಂದು ದಾಳಿಗೆ ಒಳಗಾದ ಹಿಂದೂ ಸಮುದಾಯದ ನಿವಾಸಿಗಳು ಪಾಕಿಸ್ತಾನದ ದಿ ಎಕ್ಸ್ಪ್ರೆಸ್ ಟ್ರಿಬ್ಯುನಲ್ ಪತ್ರಿಕೆಯ ವರದಿಗಾರರಿಗೆ ಮಾಹಿತಿ ನೀಡಿದ್ದಾರೆ. 6 ರಿಂದ 8 ಮಂದಿ ದುಷ್ಕರ್ಮಿಗಳ ತಂಡ ಮೋಟಾರ್ ಬೈಕ್ನಲ್ಲಿ ದೇಗುಲ ಸಂಕೀರ್ಣದ ಬಳಿ ಬಂದು ದಾಳಿ ನಡೆಸಿ ಪರಾರಿಯಾಯ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಕರಾಚಿಯ ಕೊರಂಗಿ ಪ್ರದೇಶದ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ಫಾರೂಕ್ ಸಂಜ್ರಾನಿ, ಐದು ಅಥವಾ ಆರು ಅನಾಮಧೇಯ ದುಷ್ಕರ್ಮಿಗಳು ದೇಗುಲಕ್ಕೆ ನುಗ್ಗಿ, ಮೂರ್ತಿಗಳನ್ನು ಧ್ವಂಸಗೊಳಿಸಿ ಪರಾರಿಯಾಗಿದ್ದಾರೆ ಎಂದು ಅಧಿಕೃತ ಮಾಹಿತಿ ನೀಡಿದ್ದಾರೆ.