ಆಳಪ್ಪುಳ: ಕೇಂದ್ರ ಗೃಹ ಸಚಿವ ಅಮಿತ್ ಶಾ ಕೇರಳದ ಆಳಪ್ಪುಳದಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ, ‘ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ಬೆಂಬಲ ಪಡೆದುಕೊಂಡು ಕೇರಳದಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಉಗ್ರವಾದಕ್ಕೆ ರಕ್ಷಣೆ ನೀಡುತ್ತಿವೆ,’ ಎಂದು ಆರೋಪಿಸಿದರು.
ಸಿಪಿಐಎಂ ಹಾಗೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆಡಳಿತದ ವೇಳೆ ರಾಜ್ಯದಲ್ಲಿ ಉಗ್ರವಾದಕ್ಕೆ ರಕ್ಷಣೆ ನೀಡಲಾಗಿತ್ತು. ಅಲ್ಪಸಂಖ್ಯಾತರ ಮತಗಳನ್ನು ಪಡೆಯಲು ಈ ಪಕ್ಷಗಳು ಪಿಎಫ್ಐಅನ್ನು ಬೆಂಬಲಿಸಿದ್ದವು. ಇನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟಕ್ಕೆ ಬೆಂಬಲ ನೀಡುವುದಾಗಿ ಪಿಎಫ್ಐನ ರಾಜಕೀಯ ವಿಭಾಗ ಎಸ್ಡಿಪಿಐ ಬಹಿರಂಗವಾಗಿ ಹೇಳಿದೆ ಎಂದು ತಿಳಿಸಿದರು.
2008ರ ಬೆಂಗಳೂರು ಬಾಂಬ್ ಬ್ಲಾಸ್ಟ್ ಆರೋಪಿ ಅಬ್ದುಲ್ ನಾಸರ್ ಮದನಿ ಅವರ ಪಿಡಿಪಿ ಪಕ್ಷದ ಬೆಂಬಲ ಎಲ್ಡಿಎಫ್ಗೆ ಇದೆ. ಇನ್ನೊಂದು ಬದಿಯಲ್ಲಿ ಪಿಎಫ್ಐನಂಥ ಸಂಘಟನೆಗಳಿಂದ ದೇಶವನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಹೋರಾಡುತ್ತಿದ್ದಾರೆ ಎಂದು ಶಾ ಹೇಳಿದರು.
2021ರಲ್ಲಿ ಕೊಲೆಯಾದ ಬಿಜೆಪಿಯ ಒಬಿಸಿ ಮೋರ್ಚಾದ ನಾಯಕ ರಂಜಿತ್ ಶ್ರೀನಿವಾಸನ್ ಅವರ ಬಗ್ಗೆಯೂ ಪ್ರಸ್ತಾಪಿಸಿದ ಶಾ, ಅವರನ್ನು ಪಿಎಫ್ಐ ಕಾರ್ಯಕರ್ತರು ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡಿದರು. ಅಲ್ಲದೆ ನರೇಂದ್ರ ಮೋದಿ ಅಧಿಕಾರದಲ್ಲಿರುವವರೆಗೂ ಪಿಎಫ್ಐ ಮೇಲಿನ ನಿಷೇಧ ಜಾರಿಯಲ್ಲಿರಲಿದೆ ಎಂದರು.
ಆಳಪ್ಪುಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಸುರೇಂದ್ರನ್ ಪರ ಅವರು ಪ್ರಚಾರ ನಡೆಸಿದರು.