ಬೆಳ್ತಂಗಡಿ : ದನ ಸಾಗಿಸುತ್ತಿದ್ದ ವಾಹನ ತಡೆದ ಕೋಪದಲ್ಲಿ ಕಂಠ ಪೂರ್ತಿ ಕುಡಿದು ಬಂದು ಗಲಾಟೆ ಮಾಡಿದ, ಮಂಗಳೂರು ಪಬ್ ಪ್ರಕರಣ ಸೇರಿದಂತೆ ಒಟ್ಟು ಒಂಭತ್ತು ಪ್ರಕರಣದ ರೌಡಿಶೀಟರ್, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಬ್ಬರಿಗೆ ಅವರದ್ದೇ ಪಕ್ಷದ ಮತ್ತೊಬ್ಬ ಕಾರ್ಯಕರ್ತ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಶಿಶಿಲ ಗ್ರಾಮದ ಶಿಶಿಲ ಪೇಟೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಒಂಭತ್ತು ಪ್ರಕರಣಗಳ ರೌಡಿಶೀಟರ್ ಹಾಗೂ ಕಾಂಗ್ರೆಸ್ ಕಾರ್ಯಕರ್ತನಾಗಿರುವ ಕಿರಣ್ ಶಿಶಿಲ ಮತ್ತು ಶಿಶಿಲ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ ನಡುವೆ ಮಂಗಳವಾರ ರಾತ್ರಿ 7:30 ರಿಂದ 10 ಗಂಟೆವರೆಗೆ ಶಿಶಿಲ ನಾಗನಡ್ಕ ಪೇಟೆಯಲ್ಲಿ ಗಲಾಟೆ ನಡೆದಿದೆ. ಈ ವೇಳೆ ಇಬ್ಬರು ಅವ್ಯಾಚ ಶಬ್ದಗಳಿಂದ ಬೈದುಕೊಂಡಿದ್ದು ನಂತರ ಪುರುಷೋತ್ತಮ ರೌಡಿಶೀಟರ್ ಕಿರಣ್ ಶಿಶಿಲ ಅವರನ್ನು ನಡು ರಸ್ತೆಯಲ್ಲಿ ನೆಲಕ್ಕೆ ಉರುಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ.
ಅಷ್ಟಕ್ಕೂ ಗಲಾಟೆಗೆ ಕಾರಣವೇನು? : ಕಳೆದ ಕೆಲ ದಿನಗಳ ಹಿಂದೆ ರೌಡಿಶೀಟರ್ ಕಿರಣ್ ಶಿಶಿಲ ಹಾಸನ ಜಿಲ್ಲೆಗೆ ಸಾಕಲು ಶಿಶಿಲದಿಂದ ನಾಲ್ಕು ದನಗಳನ್ನು ಕಾನೂನು ರೀತಿಯಲ್ಲಿ ಪರವಾನಿಗೆ ಪಡೆದುಕೊಂಡು ವಾಹನದಲ್ಲಿ ಸಾಗಿಸುವ ವೇಳೆ ಪುರುಷೋತ್ತಮ ಅಡ್ಡಗಟ್ಟಿದ್ದಾರೆ. ಈ ವೇಳೆ ಕಿರಣ್ ಶಿಶಿಲ ಅವರಿಗೆ ಬೈದು ವಾಹನ ಕಳುಹಿಸಿಕೊಟ್ಟಿದ್ದಾನೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪುರೋಷತ್ತಮ್ ಅಕ್ರಮ ದನ ಸಾಗಾಟ ಮಾಡಿ ಹಣ ಮಾಡುತ್ತಿರುವ ಕಿರಣ್ ಶಿಶಿಲ ಎಂದು ಸಂದೇಶ ವೈರಲ್ ಮಾಡಿದ್ದರು. ಇದಕ್ಕೆ ಕೋಪಗೊಂಡ ಕಿರಣ್ ಶಿಶಿಲ ಮಂಗಳವಾರ ರಾತ್ರಿ ಕುಡಿದು ತನ್ನ ಮೂವರು ಸ್ನೇಹಿತರ ಜೊತೆ ಬೊಲೆರೋ ವಾಹನದಲ್ಲಿ ಶಿಶಿಲ ನಾಗನಡ್ಕ ಪೇಟೆಗೆ ಒಂದು ಪುರುಷೋತ್ತಮ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದ್ದಾರೆ. ಈ ವೇಳೆ ಇಬ್ಬರು ಕೈ ಕಾರ್ಯಕರ್ತರು ಅವಾಚ್ಯ ಶಬ್ದಗಳಿಂದ ಬೈದುಕೊಂಡಿದ್ದು, ನಂತರ ನೆಲಕ್ಕೆ ಉರುಳಿಸಿ ಹೊಡೆದಾಡಿಕೊಂಡಿದ್ದಾರೆ. ನೂರಕ್ಕೂ ಹೆಚ್ಚು ಸ್ಥಳೀಯರು ಘಟನೆಗೆ ಸಾಕ್ಷಿಯಾಗಿದ್ದರು. ಈ ವೇಳೆ ಇವರಿಬ್ಬರ ಹೊಡೆದಾಟವನ್ನು ಕೆಲವರು ಮೊಬೈಲ್ ನಲ್ಲಿ ಸೆರೆಹಿಡಿದು ವೈರಲ್ ಮಾಡಿದ್ದಾರೆ.
ಪ್ರಕರಣ ದಾಖಲಿಸಿಲ್ಲ : ಈ ಬಗ್ಗೆ ಇಬ್ಬರು ಕೂಡ ಯಾವುದೇ ದೂರು ನೀಡಿಲ್ಲ. ಅದಲ್ಲದೆ ಧರ್ಮಸ್ಥಳ ಪೊಲೀಸರು ಸಾರ್ವಜನಿಕ ಪ್ರದೇಶದಲ್ಲಿ ಗಲಾಟೆ ಮಾಡಿರುವ ವಿಡಿಯೋ ಇದ್ದರೂ ಈ ವರೆಗೂ ಪ್ರಕರಣ ದಾಖಲಿಸಿಕೊಂಡಿಲ್ಲ.
ರೌಡಿ ಶೀಟರ್ ಕಿರಣ್ ಶಿಶಿಲ ಹಿನ್ನಲೆ : ಕಳೆದ ಗ್ರಾಮ ಪಂಚಾಯತ್ ವರೆಗೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಈತ ನಂತರ ಸ್ಥಳೀಯರ ಜೊತೆ ಗಲಾಟೆ ನಡೆದು ಕಾಂಗ್ರೆಸ್ ಪಕ್ಷ ಸೇರಿದ್ದ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಕಾಂಗ್ರೆಸ್ ಪಕ್ಷ ಸೇರಿ ಕಳೆದ ನವೆಂಬರ್ ನಲ್ಲಿ ಬೆಂಗಳೂರಿನಲ್ಲಿ ರೌಡಿಶೀಟರ್ ಕೊಲೆ ಸಂಚು ಪ್ರಕರಣದಲ್ಲಿ ಜೈಲು ಸೇರಿ ಬಂದಿದ್ದ.