ಬಂಟ್ವಾಳ: 15 ವರ್ಷಗಳ ಹಿಂದೆ ಬಿ.ಸಿ. ರೋಡಿನಲ್ಲಿ ವ್ಯಕ್ತಿಯೊಬ್ಬರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಕೇರಳ ಮೂಲದ ಆರೋಪಿಯನ್ನು ಬಂಟ್ವಾಳ ನಗರ ಪೊಲೀಸರು ಬುಧವಾರ ಮಂಜೇಶ್ವರದ ಬಂದ್ಯೋಡಿನಲ್ಲಿ ಬಂಧಿಸಿದ್ದಾರೆ
ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕುಂಜತ್ತೂರು ಗ್ರಾಮದ ತುಮಿನಾಡು ನಿವಾಸಿ ಮಹಮ್ಮದ್ ಫಾರೂಕ್ ಬಂಧಿತ ಆರೋಪಿ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. 2007ರಲ್ಲಿ ಬಿ.ಸಿ. ರೋಡಿನಲ್ಲಿ ನಡೆದ ಕೋಮು ಗಲಭೆಯ ಸಂದರ್ಭ ಆರೋಪಿಯು ಇತರರ ಜತೆ ಸೇರಿ ವ್ಯಕ್ತಿಯೊಬ್ಬನ ಕೊಲೆಗೆ ಯತ್ನಿಸಿದ್ದು, ಈ ಕುರಿತು ಫಾರೂಕ್ನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಆರೋಪಿಯು ಸುದೀರ್ಘ ಸಮಯದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಆರೋಪಿಯ ಕುರಿತು ಖಚಿತ ಮಾಹಿತಿ ಪಡೆದ ಬಂಟ್ವಾಳ ನಗರ ಪೊಲೀಸರು ಬುಧವಾರ ಬೆಳಗ್ಗೆ 7 ಗಂಟೆಯ ಸುಮಾರಿಗೆ ಮಂಜೇಶ್ವರದ ಬಂದ್ಯೋಡಿನಲ್ಲಿ ಬಂಧಿಸಿದ್ದಾರೆ. ನಗರ ಠಾಣೆಯ ಪ್ರೊಬೆಷನರಿ ಪಿಎಸ್ಐ ಧನರಾಜ್, ಹೆಡ್ಕಾನ್ಸ್ಟೆಬಲ್ ಗಣೇಶ್, ರಾಜೇಶ್, ಇರ್ಷಾದ್ ಅವರು ಆರೋಪಿಯನ್ನು ಬಂಧಿಸಿದ್ದಾರೆ.