ಬಂಡೀಪುರ : ಅನೇಕ ಅರಣ್ಯ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿರೋ ಬಂಡೀಪುರದ ಶ್ವಾನ ರಾಣಾ ನಿವೃತ್ತಿಯ ಅಂಚಿನಲ್ಲಿದ್ದು, ರಾಣಾನ ಸ್ಥಾನಕ್ಕೆ ಅಷ್ಟೇ ಚುರುಕಾದ ಶ್ವಾನದ ಅವಶ್ಯಕತೆ ಹೆಚ್ಚಾಗಿದೆ. ಅದಕ್ಕೆ ಅರಣ್ಯ ಇಲಾಖೆ ಇದೀಗ ದೇಸಿ ತಳಿ, ದೇಶಾವ್ಯಾಪಿಯಾಗಿರೋ ಮುಧೋಳ ಶ್ವಾನ ತರಲು ಚಿಂತನೆ ನಡೆಸಿದೆ ಎನ್ನಲಾಗಿದೆ.
ಹೌದು… ಪ್ರಧಾನಿ ನರೇಂದ್ರ ಮೋದಿ ಅವರ ಮನ ಕೀ ಬಾತ್ನಿಲ್ಲಿ ಮುಧೋಳ ತಳಿ ಬಗ್ಗೆ ಕರೆ ನೀಡಿದ ಬೆನ್ನಲ್ಲೇ ಅರಣ್ಯ ಅಪರಾಧಗಳ ಪತ್ತೆಗೆ ಮುಧೋಳ ಶ್ವಾನಗಳ ಬಳಕೆಗೆ ಬಂಡೀಪುರ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ರಾಣಾನ ಸೇವೆ ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೂ ಬಳಸಿಕೊಳ್ಳಲಾಗುವುದು.
ಆದ್ರೆ ಸದ್ಯಕ್ಕೆ ಅದು ಸಮರ್ಥವಾಗಿದ್ರೂ ಇನ್ನೊಂದು ವರ್ಷದಲ್ಲಿ ಅದು ಸಹ ನಿವೃತ್ತಿಯಾಗಲಿದೆ. ಆದರಿಂದಾಗಿ ರಾಣಾನ ಸ್ಥಾನ ತುಂಬಲು ಮುಧೋಳ ತಳಿಯ ಶ್ವಾನಗಳಿಗೆ ಒತ್ತು ನೀಡಲಾಗುತ್ತದೆ, ಮತ್ತು ಅವುಗಳನ್ನು ನೋಡಿಕೊಳ್ಳುವ ಸಿಬ್ಬಂದಿಗೂ ತರಬೇತಿ ನೀಡಲು ಶೀಘ್ರದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.