ಹಾಸನ; ಹೆತ್ತ ಮಗುವನ್ನೇ ನೀರಿನಲ್ಲಿ ಮುಳುಗಿಸಿ ಪಾಪಿ ತಾಯಿ ಕೊಲೆ ಮಾಡಿದ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಜಿನ್ನೇನಹಳ್ಳಿಕೊಪ್ಪಲುವಿನಲ್ಲಿ ನಡೆದಿದೆ. ಶ್ವೇತಾ(36) ಕೊಲೆ ಮಾಡಿದ ಪಾಪಿ ತಾಯಿ. ಸಾನ್ವಿ(6) ಕೊಲೆಯಾದ ಕಂದಮ್ಮ.
7 ವರ್ಷದ ಹಿಂದೆ ಶಿವಮೊಗ್ಗ ಮೂಲದ ರಘು ಜೊತೆ ಶ್ವೇತಾ ಮದುವೆಯಾಗಿತ್ತು. ವಿವಾಹವಾಗಿ 2 ವರ್ಷಕ್ಕೆ ದಂಪತಿ ಮಧ್ಯೆ ವಿರಸ ಮೂಡಿತ್ತು. 4 ವರ್ಷದಿಂದ ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ಶ್ವೇತಾ ಬದುಕುತ್ತಿದ್ದಳು. ಅಲ್ಲದೇ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದಳು. ಶ್ವೇತಾ ಪತಿ ರಘು ಪೋಷಕರು ಪುತ್ರಿ ಸಾನ್ವಿಯ ಆರೈಕೆ ಜವಾಬ್ದಾರಿ ಹೊತ್ತಿದ್ದರು.

ಕೊಲೆ ಮಾಡಿದ ಪಾಪಿ ತಾಯಿ ಶ್ವೇತಾ..
ಇನ್ನು ಶನಿವಾರ ಬೆಂಗಳೂರಿನಿಂದ ಮಗಳು ಸಾನ್ವಿಯನ್ನು ಕರೆದುಕೊಂಡು ತವರು ಮನೆಗೆ ಶ್ವೇತಾ ಬಂದಿದ್ದಳು. ನಿನ್ನೆ ಬೆಳಿಗ್ಗೆ ಗ್ರಾಮದ ಕಟ್ಟೆಯ ಕಡೆಗೆ ಹೋಗುತ್ತೇನೆಂದು ಪುತ್ರಿ ಸ್ವಾನಿಯನ್ನು ಕರೆದುಕೊಂಡು ಶ್ವೇತಾ ಹೋಗಿದ್ದಳು. ಈ ವೇಳೆ ಜಮೀನಿನ ಬಳಿ ನೀರಿನಲ್ಲಿ ಮುಳುಗಿಸಿ ಮಗುವನ್ನು ಕೊಂದಿದ್ದಾಳೆ. ಮಗು ಕಿರುಚಾಡುತ್ತಿದ್ದನ್ನು ಕೇಳಿ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಓಡಿ ಬಂದಿದ್ದಾರೆ. ಕೂಡಲೇ ವರಸೆ ಬದಲಿಸಿ ನಾನು ಮಗು ಇಬ್ಬರೂ ಸಾಯಲು ಪ್ರಯತ್ನಿಸಿದ್ದೆವು ಎಂದು ಗ್ರಾಮಸ್ಥರಿಗೆ ಶ್ವೇತಾ ಹೇಳಿದ್ದಾಳೆ. ತಕ್ಷಣವೇ ಬಾಲಕಿಯನ್ನು ಎತ್ತಿಕೊಂಡು ಗ್ರಾಮಸ್ಥರು ಆಸ್ಪತ್ರೆಗೆ ಕರೆತಂದಿದ್ದಾರೆ. ಅಷ್ಟರಲ್ಲಿ ಮಗು ಸಾವನ್ನಪ್ಪಿದೆ. ಈ ಬಗ್ಗೆ ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.