ಬಂಟ್ವಾಳ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಕಪಾಟಿನಲ್ಲಿ ಇರಿಸಿದ್ದ ನಗದನ್ನು ಕಳ್ಳತನ ಮಾಡಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಕುಂಪಣಮಜಲು ಎಂಬಲ್ಲಿ ನಡೆದಿದೆ.
ಪುದು ಗ್ರಾ.ಪಂ.ವ್ಯಾಪ್ತಿಯ ಕುಂಪಣಮಜಲು ನಿವಾಸಿ ವಸೀಂ ಅಕ್ರಂ ಎಂಬವರ ಮನೆಯ ಕಪಾಟಿನಲ್ಲಿದ್ದ ಸುಮಾರು 60,000 ಸಾವಿರ ರೂಪಾಯಿಯನ್ನು ಕಳ್ಳತನ ಮಾಡಲಾಗಿದೆ. ವಸೀಂ ಅಕ್ರಂ ಅವರ ಪತ್ನಿ ಕಳೆದ ಆರು ತಿಂಗಳಿನಿಂದ ಉಳ್ಳಾಲದ ತಾಯಿ ಮನೆಯಲ್ಲಿದ್ದು, ವಸೀಂ ಅಕ್ರಂ ರಾತ್ರಿ ಅತ್ತೆ ಮನೆಯಲ್ಲಿ ತಂಗುತ್ತಿದ್ದರು.ಮನೆಯಲ್ಲಿ ವಸೀಂ ಅಕ್ರಂ ಅವರ ತಾಯಿ ಮಾತ್ರ ವಾಸವಿದ್ದರು. ರಾತ್ರಿ ವೇಳೆ ಅವರು ಇನ್ನೊಬ್ಬ ಮಗನ ಮನೆಗೆ ಹೋಗಿ ತಂಗುತ್ತಿದ್ದರು.ರಾತ್ರಿ ಮಗನ ಮನೆಯಲ್ಲಿ ತಂಗಿ ವಾಪಾಸು ಬೆಳಿಗ್ಗೆ ಇವರ ಮನೆಗೆ ಬರುತ್ತಿದ್ದರು.
ಅದರಂತೆ ಸೆ. 10 ರಂದು ರಾತ್ರಿ ವೇಳೆ ಇವರು ಮನೆಯಿಂದ ತೆರಳಿದ ಬಳಿಕ ಯಾರೋ ಕಳ್ಳರು ಹಿಂಬದಿಯ ಬಾಗಿಲು ಚಿಲಕ ಮುರಿದು ನುಗ್ಗಿ ಕೋಣೆಯಲ್ಲಿ ಇದ್ದ ಎಲ್ಲಾ ವಸ್ತುಗಳನ್ನು ಜಾಲಾಡಿ ಕಪಾಟಿನಲ್ಲಿರಿಸಲಾಗಿದ್ದ 60 ಸಾವಿರ ರೂಪಾಯಿಯನ್ನು ಕದ್ದಿದ್ದಾರೆ.
ಸೆ.11 ರಂದು ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಗೆ ದೂರು ನೀಡಲಾಗಿದೆ. ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.