ಮಂಗಳೂರು; ಲೋಕಸಭಾ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿದಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಅಪರಾಹ್ನ ಮೈಸೂರಿನಿಂದ ತಮ್ಮ ಯಾತ್ರೆ ಆರಂಭಿಸಿದ್ದು ರಾತ್ರಿ ಮಂಗಳೂರಿನಲ್ಲಿ ಭರ್ಜರಿ ರೋಡ್ಶೋ ಮೂಲಕ ಚುನಾವಣಾ ಪ್ರಚಾರ ನಡೆಸಿದರು.
ಲೇಡಿ ಹಿಲ್ ನಾರಾಯಣಗುರು ವೃತ್ತದಿಂದ ನವಭಾರತ ವೃತ್ತದವರೆಗೆ ತೆರೆದ ವಾಹನದಲ್ಲಿ ಸುಮಾರು 2 ಕಿ.ಮೀ. ರೋಡ್ಶೋ ನಡೆಸಿದರು. ಎಡಿಜಿಪಿ ಚಂದ್ರಶೇಖರ್, ಐಜಿಪಿ ಬೋರಲಿಂಗಯ್ಯ, ಮಂಗಳೂರು ಪೊಲೀಸ್ ಆಯುಕ್ತರ ನೇತೃತ್ವದಲ್ಲಿ 1,500 ಕ್ಕೂ ಅಧಿಕ ಪೊಲೀಸರು ರೋಡ್ ಶೋಗೆ ಬಿಗಿ ಭದ್ರತೆ ಒದಗಿಸಿದ್ದರು.
ದಕ್ಷಿಣಕನ್ನಡ, ಉಡುಪಿ ಸೇರಿದಂತೆ ಮೂಲೆ ಮೂಲೆಗಳಿಂದ ಸಾವಿರಾರು ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮೋದಿಯನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಂಡರು. ಮೋದಿ ಮುಖವಾಡ, ಧ್ವಜ, ಕೇಸರಿ ಟೋಪಿ ಧರಿಸಿಕೊಂಡು ಮೋದಿ ಪರ ಜೈ ಕಾರದ ಘೋಷಣೆ ಮುಗಿಲು ಮುಟ್ಟಿತ್ತು. ಕರಾವಳಿಯ ಜನಪದ ನೃತ್ಯ, ಹುಲಿ ಕುಣಿತ ರೋಡ್ ಶೋ ಮೆರುಗನ್ನು ಹೆಚ್ಚಿಸಿತ್ತು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಮತ್ತು ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಪ್ರಧಾನಿ ಮೋದಿಗೆ ಸಾಥ್ ನೀಡಿದರು.