ಪಡುಬಿದ್ರೆ: ಕುಡಿಯಲು ನೀರು ಕೇಳುವ ನೆಪದಲ್ಲಿ ಬಂದು ಮಹಿಳೆಯ ಚಿನ್ನಾಭರಣ ದೋಚಲು ಯತ್ನಿಸಿರುವ ಘಟನೆ ಎಲ್ಲೂರು ಗ್ರಾಮದ ದಳಂತ್ರ ಕೆರೆ ಸಮೀಪ ನಡೆದಿದೆ. ಇಲ್ಲಿನ ಕೃಷ್ಣರಾಜ ಹೆಗಡೆ ಅವರ ಮನೆಗೆ ದ ಪಾಲಡ್ಕ ನಿವಾಸಿ ಶರತ್ ಎಂಬಾತ ಬಂದು ಕುಡಿಯಲು ನೀರು ಕೇಳಿದ್ದ. ಮನೆ ಮಾಲಕಿ ಸುನೀತಿ ಹೆಗಡೆ ನೀರು ತರಲು ಒಳಗೆ ಹೋದಾಗ ಆರೋಪಿಯು ಹಿಂಬಾಲಿಸಿಕೊಂಡು ಹೋಗಿದ್ದ. ಮಹಿಳೆಯನ್ನು ಅಡುಗೆ ಮನೆಯಿಂದ ಸ್ನಾನದ ಕೋಣೆಯವರೆಗೆ ತಳ್ಳಿಕೊಂಡು ಹೋಗಿ ಅಲ್ಲಿ ಬೀಳಿಸಿದ್ದ. ಬಳಿಕ ಬಾತ್ಟವೆಲ್ನಲ್ಲಿ ಉಸಿರುಗಟ್ಟಿಸಲು ಯತ್ನಿಸಿ ಕುತ್ತಿಗೆಯಲ್ಲಿದ್ದ ಬಂಗಾರದ ಕರಿಮಣಿ ಸರವನ್ನು ಕಸಿಯಲು ಮುಂದಾಗಿದ್ದ. ಈ ಸಂದರ್ಭದಲ್ಲಿ ಕೃಷ್ಣರಾಜ ಹೆಗಡೆ ಹೊರಗೆ ಹೋಗಿದ್ದರು.
ಸುನೀತಿ ಅವರು ಬೊಬ್ಬೆ ಹಾಕಿದ್ದು ಕೇಳಿ ಕೃಷ್ಣರಾಜ ಹೆಗಡೆ ಓಡಿ ಬಂದಾಗ ಆರೋಪಿಯು ಪರಾರಿಯಾಗಿದ್ದ. ಪಡುಬಿದ್ರಿ ಪೊಲೀಸರು ಈತನನ್ನು ಕೇವಲ 12 ತಾಸುಗಳಲ್ಲಿ ಮುದರಂಗಡಿಯಲ್ಲಿ ಬಂಧಿಸುವಲ್ಲಿ ಸಫಲರಾಗಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇನ್ನು ಆರೋಪಿ ಈ ಹಿಂದೆ ಇವರ ಮನೆಯಲ್ಲಿ ಕೆಲಸಕ್ಕಿದ್ದ ಎನ್ನಲಾಗಿದೆ.