
ವಿಜಯಪುರ: ಬಿಜೆಪಿಯವರೇ ನನ್ನ ಕರೆದು ಸಿಎಂ ಅಭ್ಯರ್ಥಿ ಎಂದು ಹೇಳುವ ಕಾಲ ಬರುತ್ತದೆ ಎಂದು ಬಿಜೆಪಿಯಿಂದ ಉಚ್ಛಾಟಿತ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಪ್ರಚಾರ ಮಾಡುವ ಬಗ್ಗೆ ವಿಜಯಪುರದಲ್ಲಿ ಇಂದು ಪ್ರತಿಕ್ರಿಯೆ ನೀಡಿರುವ ಯತ್ನಾಳ್, ಬಿಜೆಪಿ ಹಾಗೂ ನರೇಂದ್ರ ಮೋದಿ ಅವರಿಗಾಗಿ ನಾನು ಪ್ರಚಾರಕ್ಕೆ ಹೋಗುತ್ತಿದ್ದೇನೆ. ಬಿಜೆಪಿಗೆ ವಾಪಸ್ ಹೋಗಲು ನಾನು ಯಾರ ಮನೆ ಬಾಗಿಲಿಗೂ ಹೋಗಿಲ್ಲ ಮತ್ತು ನನ್ನ ಬಿಜೆಪಿಗೆ ತೆಗೆದುಕೊಳ್ಳುವಂತೆ ಕೇಳುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಗೆ ವಾಪಸ್ ಹೋಗಲು ಯತ್ನಾಳ್ ನಾಟಕ ಮಾಡುತ್ತಿದ್ದಾರೆ ಎಂಬ ಸಚಿವ ಎಂ.ಬಿ. ಪಾಟೀಲ್ ಆರೋಪಕ್ಕೆ ತಿರುಗೇಟು ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾಟಕ ಮಾಡುವುದಾದರೆ ಹಿಂದೆಯೇ ಯಡಿಯೂರಪ್ಪ ಮಕ್ಕಳಿಗೆ ಕಾಲು ಹಿಡಿಯುತ್ತಿದ್ದೆ, ಅಪ್ಪಾಜಿ ಎಂದು ಹೇಳಿ ಬಿಡುತ್ತಿದ್ದೆ ಎಂದಿದ್ದಾರೆ.
ಇದೇ ವೇಳೆ, 2028ಕ್ಕೆ ಕರ್ನಾಟಕದಲ್ಲಿ ಹಿಂದೂ ಸರ್ಕಾರ ಬರುತ್ತದೆ ಎಂದು ಹೇಳಿರುವ ಯತ್ನಾಳ್, ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ಯೋಜನೆಗಳನ್ನು ಮುಸ್ಲಿಮರಿಗೆ ಕೊಟ್ಟಿದ್ದಾರೆ,. ಎಲ್ಲರಿಗೂ ಸರಿಯಾಗಿ ಯೋಜನೆ ಕೊಟ್ಟಿರುತ್ತಿದ್ದರೆ ಉಪ ಚುನಾವಣೆಯಲ್ಲಿ ನಾನು ತಟಸ್ಥವಾಗಿರುತ್ತಿದ್ದೆ ಎಂದು ಹೇಳಿದ್ದಾರೆ.


