ಹಾಸನ: ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಮಾಸುವ ಮುನ್ನವೇ ಹಾಸನದಲ್ಲಿ ಅಂತಹದ್ದೇ ಘಟನೆಯೊಂದು ನಡೆದಿದೆ. ಕೊರಿಯರ್ ಅಂಗಡಿಯೊಂದರಲ್ಲಿ ಅನುಮಾನಾಸ್ಪದವಾಗಿ ಮಿಕ್ಸಿ ಬ್ಲಾಸ್ಟ್ ಆಗಿದೆ. ಹಾಸನದ ಕುವೆಂಪುನಗರ ಬಡಾವಣೆಯ 16ನೇ ಕ್ರಾಸ್ನಲ್ಲಿರುವ ಡಿಟಿಡಿಸಿ ಕೊರಿಯರ್ ಅಂಗಡಿಯಲ್ಲಿ ಘಟನೆ ನಡೆದಿದೆ. ಅಂಗಡಿಯಲ್ಲಿದ್ದ ಶಶಿ ಎಂಬುವವರ ಕೈಗೆ ಮತ್ತು ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ.
ಡಿಟಿಡಿಸಿ ಅಂಗಡಿಗೆ ಮಿಕ್ಸಿ ಪಾರ್ಸಲ್ ಬಂದಿತ್ತು. ಈ ಪಾರ್ಸಲ್ ತೆಗೆದುಕೊಂಡು ಹೋಗಿದ್ದ ವ್ಯಕ್ತಿಯು, ಮಿಕ್ಸಿ, ಜಾರ್ ನಮಗೆ ಬೇಡ ಎಂದು ಅಂಗಡಿ ಮಾಲಕನಿಗೆ ವಾಪಸ್ ನೀಡಿದ್ದ ಎನ್ನಲಾಗಿದೆ. ಅಂಗಡಿ ಮಾಲಕ ಶಶಿ ಮಿಕ್ಸಿಯನ್ನು ಪರಿಶೀಲನೆ ಮಾಡುವಾಗ ಸ್ಫೋಟಗೊಂಡಿದೆ ಎಂದು ಹೇಳಲಾಗಿದೆ.ಸ್ಫೋಟದ ತೀವ್ರತೆಗೆ ಅಂಗಡಿ ಮಾಲಕ ಶಶಿ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಎಸ್ಪಿ ಹರಿರಾಮ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಳಿಕ ವಿವರಣೆ ನೀಡಿದ ಎಸ್ಪಿ, ಮಿಕ್ಸಿ ಯಾಕೆ ಮತ್ತು ಹೇಗೆ ಬ್ಲಾಸ್ಟ್ ಆಗಿದೆ ಎಂದು ಪರಿಶೀಲನೆ ಮಾಡಲಾಗುತ್ತೆ, ಕೊರಿಯರ್ ಎಲ್ಲಿಂದ ಬಂತು ಎನ್ನೋ ಮಾಹಿತಿ ಇದೆ. ಎಲ್ಲವನ್ನೂ ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಯಾರೂ ಊಹಾಪೋಹಗಳಿಗೆ ಒಳಗಾಗಿ ಗೊಂದಲ ಆಗೋದು ಬೇಡ ಎಂದಿದ್ದಾರೆ.