ಉಪ್ಪಿನಂಗಡಿ: ಮೀನು ಹಿಡಿಯಲು ಹೋಗಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಮೊಗ್ರು ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಮೊಗ್ರು ಗ್ರಾಮದ ದಂಡುಗ ಮನೆ ನಿವಾಸಿ ಜನಾರ್ದನ (42) ನಾಪತ್ತೆಯಾದವರು. ಅವರು ತನ್ನ ಸ್ನೇಹಿತ ಮಹೇಶ್ ಅವರ ಜೊತೆ ಮುಗೇರಡ್ಕ ಎಂಬಲ್ಲಿ ನೇತ್ರಾವತಿ ನದಿಗೆ ಬಲೆ ಹಾಕಿ ಮೀನು ಹಿಡಿಯಲು ನೀರಿಗಿಳಿದಿದ್ದರು. ನೀರಿಗಿಳಿದ ಸ್ಥಳದಲ್ಲಿ ಅಣೆಕಟ್ಟು ನಿರ್ಮಾಣವಾಗುತ್ತಿದ್ದ ಕೆಸರು ತುಂಬಿ ಅಪಾಯಕಾರಿಯಾಗಿತ್ತು. ಮೊದಲು ನೀರಿಗಿಳಿದಿದ್ದ ಜನಾರ್ದನ ಅವರು ನೀರಿನಲ್ಲಿ ಮುಳುಗಿ ನಾಪತ್ತೆಯಾದರೆಂದೂ ತಿಳಿದ ಮಹೇಶ್ ರಕ್ಷಣೆಗೆ ಸ್ಥಳೀಯರ ಸಹಕಾರ ಪಡೆಯದೆ ನೇರವಾಗಿ ಜನಾರ್ದನ್ ಅವರ ಮನೆಗೆ ಹೋಗಿ ಅವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದರು.
ಅಷ್ಟೇ ಅಲ್ಲದೇ ಅನಂತರ ಬಾರಿಗೆ ತೆರಳಿ ಬಾರಿನಲ್ಲಿ ಮದ್ಯ ಸೇವಿಸುತ್ತಿದ್ದ ಮಹೇಶ್ನಿಗೆ ಜನಾರ್ದನ್ ಸಂಬಂಧಿಕರು ಹಾಗೂ ಗೆಳೆಯರ ಬಳಗ ಹಲ್ಲೆ ನಡೆಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಇನ್ನು ನಾಪತ್ತೆಯಾದ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.ಉಪ್ಪಿನಂಗಡಿ ಪೊಲೀಸರ ಮಾರ್ಗದರ್ಶನದಲ್ಲಿ ಮುಳುಗುಪಟುಗಳಿಂದ ಹುಡುಕಾಟ ಮುಂದುವರಿದಿದೆ.