ಬೆಂಗಳೂರು: ಕೇರಳದ ಕುಟುಂಬಶ್ರೀ ಯೋಜನೆಯ ಮಾದರಿಯಲ್ಲೇ ರಾಜ್ಯದಲ್ಲಿ ಕೂಡ ಕೋಳಿ ಉತ್ಪಾದನೆ, ಮಾರುಕಟ್ಟೆ ಮತ್ತು ಮಾರಾಟವನ್ನು ಮಹಿಳಾ ಸ್ವಸಹಾಯ ಸಂಘಗಳಿಗೆ ವಹಿಸಲು ಆದೇಶಿಸಬೇಕೆಂದು ಕೋರಿ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಪಶುಸಂಗೋಪನೆ ಸಚಿವರಿಗೆ ಪತ್ರ ಬರೆದಿದ್ದಾರೆ.
ತಮ್ಮ ಪತ್ರದಲ್ಲಿ ಅವರು, ಕೇರಳದಲ್ಲಿ ಇರುವ ಯೋಜನೆಯಲ್ಲಿ ವರ್ಷಕ್ಕೆ 100 ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದೆ. ನಮ್ಮಲ್ಲಿ 2 ಲಕ್ಷ ಸ್ವಸಹಾಯ ಸಂಘಗಳಿದ್ದು, 30 ಲಕ್ಷ ಮಹಿಳೆಯರು ಇವುಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಕುಟುಂಬಶ್ರೀ ಮಾದರಿಯನ್ನು ರಾಜ್ಯದಲ್ಲೂ ಅಳವಡಿಸಿ ಕೊಂಡರೆ ಮಹಿಳೆಯರ ಸಬಲೀಕರಣ ಮತ್ತು ಆರ್ಥಿಕ ಬೆಳವಣಿಗೆಯನ್ನು ಸಾಧಿಸಬಹುದು ಎಂದು ಸಚಿವರಾದ ಹಾಲಪ್ಪ ಆಚಾರ್ ಮತ್ತು ಪ್ರಭು ಚವಾಣ್ ಅವರ ಗಮನಕ್ಕೆ ತಂದಿದ್ದಾರೆ.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿ ಇರುವ ಸಂಜೀವಿನಿ ಉಪಕ್ರಮದಡಿ, ರಾಜ್ಯದ ಅಂಗನವಾಡಿ ಮತ್ತು ಸರಕಾರಿ ಶಾಲೆಗಳ ಮಕ್ಕಳಿಗೆ ಕೋಳಿಮೊಟ್ಟೆ ವಿತರಣೆಯ ಕಾರ್ಯವನ್ನು ಮಹಿಳಾ ಸ್ವಸಹಾಯ ಸಂಘಗಳಿಗೆ ವಹಿಸಬೇಕು. ಇದಕ್ಕಾಗಿ ಕೌಶಲ್ಯಾಭಿವೃದ್ಧಿ ನಿಗಮದ ನೆರವನ್ನು ಕೂಡ ಕೊಡಲು ಉಜ್ವಲ ಅವಕಾಶವಿದೆ ಎಂದು ಅವರು ಪ್ರಸ್ತಾಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ತಾವು ಆದಷ್ಟು ಬೇಗ ಸೂಕ್ತ ಆದೇಶ ಹೊರಡಿಸಬೇಕು ಎಂದು ಅಶ್ವತ್ಥ ನಾರಾಯಣ ಮನವಿ ಮಾಡಿಕೊಂಡಿದ್ದಾರೆ.