ಧಾರವಾಡ: ಲಾಕ್ ಡೌನ್ ಹಿನ್ನಲೆಯಲ್ಲಿ ಮಂಗಳೂರು ಮತ್ತು ಕಾಸರಗೋಡಿನಲ್ಲಿ ಬಾಕಿಯಾಗಿದ್ದ ಸುಮಾರು 74 ವಲಸೆ ಕಾರ್ಮಿಕರನ್ನು ಅಕ್ರಮವಾಗಿ ರಾಜಸ್ಥಾನಕ್ಕೆ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಗದಗ ಪೋಲೀಸರು ವಶಪಡಿಸಿಕೊಂಡಿದ್ದಾರೆ
ಈ ಟ್ರಕ್ಗಳಲ್ಲಿ 27 ವಲಸೆ ಕಾರ್ಮಿಕರು ಕಾಸರಗೋಡಿನವರಾದರೆ 47 ಮಂದಿ ಮಂಗಳೂರಿನಿಂದ ಬಂದಿದ್ದರು ಎನ್ನಲಾಗಿದೆ. ಗದಗ ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಸಿಬ್ಬಂದಿ ಪರಿಶೀಲಿಸಿದಾಗ, ಲಾರಿಗಳು ಜನರನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
ಟ್ರಕ್ ನಲ್ಲಿದ್ದ ಎಲ್ಲ ವಲಸೆ ಕಾರ್ಮಿಕರನ್ನು ಧಾರವಾಡದ ಪಟ್ಟಣಶೆಟ್ತಿ ಮದುವೆ ಮಂಟಪದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಎರಡೂ ಟ್ರಕ್ ಚಾಲಕರ ವಿರುದ್ಧ ದೂರು ದಾಖಲಿಸಲಾಗಿದೆ.
ಎಲ್ಲ ಕಾರ್ಮಿಕರನ್ನು ಸಮರ್ಪಕ ತಪಾಸಣೆ ನಡೆಸಿದ ಬಳಿಕ ಶ್ರಮಿಕ ರೈಲು ಅಥವಾ ಪರ್ಯಾಯ ಸಾರಿಗೆ ವ್ಯವಸ್ಥೆಯಲ್ಲಿ ರಾಜಸ್ಥಾನಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ತಿಳಿಸಿದ್ದಾರೆ.